ಪ್ರಜಾವಾಣಿ ವಾರ್ತೆ
ತುಮಕೂರು: ಜಿಲ್ಲೆಯ 1,32,332 ರೈತರ ಖಾತೆಗೆ ₹74 ಕೋಟಿ ಬರ ಪರಿಹಾರ ಹಣ ಜಮೆ ಮಾಡಲಾಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 15,975 ರೈತರಿಗೆ ₹9.28 ಕೋಟಿ, ಗುಬ್ಬಿಯ 8,234 ರೈತರಿಗೆ ₹4.10 ಕೋಟಿ, ಕೊರಟಗೆರೆಯ 12,144 ಜನರಿಗೆ ₹7.28 ಲಕ್ಷ, ಕುಣಿಗಲ್ನ 19,022 ಮಂದಿಗೆ ₹9.64 ಲಕ್ಷ, ಮಧುಗಿರಿಯ 15,548 ರೈತರಿಗೆ ₹8.97 ಕೋಟಿ, ಪಾವಗಡದ 5,641 ರೈತರಿಗೆ ₹4.25 ಕೋಟಿ, ಶಿರಾದ 17,013 ರೈತರಿಗೆ ₹11.19 ಲಕ್ಷ, ತಿಪಟೂರಿನ 14,955 ರೈತರಿಗೆ ₹7.78 ಕೋಟಿ, ತುಮಕೂರಿನ 11,004 ರೈತರಿಗೆ ₹5.20 ಕೋಟಿ ಹಾಗೂ ತುರುವೇಕೆರೆಯ 12,796 ರೈತರಿಗೆ ₹6.48 ಕೋಟಿ ಸೇರಿದಂತೆ 1,32,332 ರೈತರಿಗೆ 74.21 ಕೋಟಿ ಬರ ಪರಿಹಾರ ವಿತರಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳ ಜತೆ ಸಭೆ ನಡೆಸಿ ಈ ಮಾಹಿತಿ ಹಂಚಿಕೊಂಡರು.
‘ಪರಿಹಾರದ ಹಣ ಬಾರದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು. ಜಿಲ್ಲೆಯ 18 ಮೇವು ಬ್ಯಾಂಕ್ಗಳಲ್ಲಿ ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಅಹವಾಲು ಆಲಿಸಲು ಸಹಾಯವಾಣಿ ಕೇಂದ್ರ ತೆರೆಯಬೇಕು’ ಎಂದು ಸೂಚಿಸಿದರು.
ಆಶ್ರಯ ವಸತಿ ಯೋಜನೆಯಡಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು 1,728 ಎಕರೆ ಜಮೀನು ಗುರುತಿಸಿ ಮಂಜೂರಾತಿ ಆದೇಶ ನೀಡಲಾಗಿದೆ. 1,199 ಎಕರೆ ಪ್ರದೇಶವನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.