ADVERTISEMENT

ಒಕ್ಕಲಿಗ ಅಭಿವೃದ್ಧಿ ನಿಗಮ ರಚನೆ:ಡಿಸಿಎಂ

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 20:56 IST
Last Updated 23 ನವೆಂಬರ್ 2020, 20:56 IST
ಸಿ.ಎನ್.ಅಶ್ವತ್ಥ ನಾರಾಯಣ
ಸಿ.ಎನ್.ಅಶ್ವತ್ಥ ನಾರಾಯಣ   

ತುಮಕೂರು: ಒಕ್ಕಲಿಗ ಸಮುದಾಯದ ಅಪೇಕ್ಷೆಯ ಮೇರೆಗೆ ಸರ್ಕಾರ ‘ಒಕ್ಕಲಿಗ ಅಭಿವೃದ್ಧಿ ನಿಗಮ’ ರಚನೆ ಮಾಡಲಿದೆ ಎಂದುಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ಜಾತಿ, ಜನಾಂಗದ ಅಭಿವೃದ್ಧಿ ಕಾರಣಕ್ಕೆ ನಿಗಮ ರಚನೆ ಆಗುತ್ತದೆ. ಒಂದು ಜನಾಂಗಕ್ಕೆ ನಿಗಮ ರೂಪಿಸಿದಾಗ ಬೇರೆ ಸಮುದಾಯಗಳ ಜನರೂ ಬೇಡಿಕೆ ಸಲ್ಲಿಸುತ್ತಾರೆ. ಈ ವಿಚಾರದಲ್ಲಿ ಜನರ ಭಾವನೆಗಳಿಗೆ ಪೂರಕವಾಗಿ ಸರ್ಕಾರ ಕೆಲಸ ಮಾಡಬೇಕಾಗುತ್ತದೆ ಎಂದರು.

ಪದವಿ, ಸ್ನಾತಕೋತ್ತರ ಪದವಿ ತರ ಗತಿಗಳಿಗೆ ಶನಿವಾರದವರೆಗೆ ಶೇ 9ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣ ಪತ್ರವನ್ನು ವಿದ್ಯಾರ್ಥಿಗಳು ತರಬೇಕು. ಹೀಗೆ ಪರೀಕ್ಷೆ ಮಾಡಿಸಿದ 180 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿ ‍ಪರೀಕ್ಷೆ ವರದಿಯನ್ನು 48 ಗಂಟೆಯೊಳಗೆ ನೀಡಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಗೆ ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

‘ಶಾ ಭೇಟಿ ಕಾರ್ಯಕ್ರಮ ಇರಲಿಲ್ಲ’
ಯಡಿಯೂರಪ್ಪ ಅವರ ಇತ್ತೀಚಿನ ದೆಹಲಿ ಪ್ರವಾಸದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವೇ ನಿಗದಿ ಆಗಿರಲಿಲ್ಲ. ಹೀಗಿದ್ದಾಗ ಭೇಟಿಗೆ ಅಮಿತ್ ಶಾ ಅವಕಾಶ ನೀಡಲಿಲ್ಲ ಎಂದುಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡಬಾರದು. ವಿರೋಧ ಪಕ್ಷಗಳಿಗೆ ಸರ್ಕಾರದ ಬಗ್ಗೆ ಟೀಕೆ ಮಾಡಲು ಯಾವುದೇ ವಿಚಾರಗಳು ಉಳಿದಿಲ್ಲ. ಇಂತಹ ಸಲ್ಲದ ಆರೋಪಗಳನ್ನು ಮಾಡುತ್ತಿವೆ ಎಂದು ಟೀಕಿಸಿದರು.

**

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾನೂನು ಪಾಲಿಸಬೇಕು. ನಾವು ಸಿಬಿಐ ಮೂಲಕ ಅವರನ್ನು ಎದುರಿಸುತ್ತಿಲ್ಲ. ವ್ಯಕ್ತಿ ಆಧಾರಿತ ಕಾನೂನು ಇಲ್ಲ. ಎಲ್ಲರಿಗೂ ಒಂದೇ ಕಾನೂನು ಅನ್ವಯ. ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿದ್ದು ಕಾನೂನು ಪ್ರಕಾರ ತನಿಖೆ ನಡೆಯುತ್ತದೆ
–ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.