ADVERTISEMENT

ಎಡೆಯೂರು ಕ್ಷೇತ್ರ; ಇಂದು ಮುಖ್ಯಮಂತ್ರಿಯಿಂದ ಉದ್ಘಾಟನೆ

ಕ್ಷೇತ್ರದಲ್ಲಿ ಕೈಗೊಂಡ ₹ 10 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ, ₹ 5 ಕೋಟಿ ಮೊತ್ತದ ಕಾಮಗಾರಿಗೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:46 IST
Last Updated 17 ಅಕ್ಟೋಬರ್ 2019, 19:46 IST
ದೇವಾಲಯದ ಆವರಣದಲ್ಲಿ ವೇದಿಕೆ, ಸಭಿಕರಿಗೆ ಶಾಮಿಯಾನ ಹಾಕುತ್ತಿದ್ದ ನೋಟ ಗುರುವಾರ ಕಂಡು ಬಂದಿತು
ದೇವಾಲಯದ ಆವರಣದಲ್ಲಿ ವೇದಿಕೆ, ಸಭಿಕರಿಗೆ ಶಾಮಿಯಾನ ಹಾಕುತ್ತಿದ್ದ ನೋಟ ಗುರುವಾರ ಕಂಡು ಬಂದಿತು   

ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಶುಕ್ರವಾರ (ಅ.18) ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯದ ನವೀಕರಣ ಕಾಮಗಾರಿಯಡಿ (2ನೇ ಹಂತದ ಕಾಮಗಾರಿ) ದೇವಾಲಯ ಪ್ರವೇಶ ಪ್ರಾಂಗಣ, ನಡು ಪ್ರಾಂಗಣ ಮತ್ತು ಸಿದ್ಧಲಿಂಗೇಶ್ವರ ಸ್ವಾಮಿಯ ಪವಾಡ ದೃಶ್ಯಗಳನ್ನೊಳಗೊಂಡ ಪ್ರದಕ್ಷಿಣೆ ಪ್ರಾಂಗಣ ಸೇರಿ ಭಕ್ತರ ಕಣ್ಮನ ಸೆಳೆಯುತ್ತಿವೆ.

ನೂತನ ಕಾಮಗಾರಿಗಳ ಉದ್ಘಾಟನೆ ಶುಕ್ರವಾರ ನಡೆಯಲಿದ್ದು, ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಸುಮಾರು 2000ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಆಸನ, ಬೃಹತ್ ಶಾಮಿಯಾನ ಹಾಕಲಾಗಿದೆ.

ADVERTISEMENT

ಧಾರ್ಮಿಕ ದತ್ತಿ ಇಲಾಖೆ, ಲೋಕೋಪಯೋಗಿ ಇಲಾಖೆ, ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರ ಹಾಗೂ ಜಿಲ್ಲಾಡಳಿತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾಮಗಾರಿ ಉದ್ಘಾಟನೆ ಪೂರ್ವ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದ ಬಳಿಕ ಮಾತನಾಡಿದ ತುಮಕೂರು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಲ್‌.ಶಿವಕುಮಾರ್, ‘ಒಟ್ಟು ₹ 10 ಕೋಟಿ ಮೊತ್ತದಲ್ಲಿ ಈ ಕಾಮಗಾರಿಗಳನ್ನು ಮುಖ್ಯಮಂತ್ರಿ ಶುಕ್ರವಾರ ಬೆಳಿಗ್ಗೆ ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.

‘ಇದೇ ವೇಳೆ ಬೆಂಗಳೂರಿನ ನಂದಿನಿ ಲೇ ಔಟ್ ನಲ್ಲಿ ದೇವ ಸ್ಥಾನದ ನಿವೇಶನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 5 ಕೋಟಿ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ' ಎಂದು ತಿಳಿಸಿದರು.

'ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಸಮುದಾಯ ಭವನ ನಿರ್ಮಾಣಕ್ಕೂ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.