ಕುಣಿಗಲ್: ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ವಾಹನಗಳು ದೊರೆಯದೆ ಸೋಂಕಿತರು ಪರದಾಡುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗಾಗಿ ಸೇವಾಭಾರತಿ ಸಂಸ್ಥೆಯೂ ತಾಲ್ಲೂಕು ಆಡಳಿತಕ್ಕೆ ತುರ್ತು ಚಿಕಿತ್ಸಾ ವಾಹನ ನೀಡುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ರಾಜೇಶ್ ಗೌಡ ಮನವಿ ಮಾಡಿದರು.
ಸೇವಾಭಾರತಿಯಿಂದ ನೀಡುತ್ತಿರುವ ತುರ್ತು ಚಿಕಿತ್ಸಾ ವಾಹನವನ್ನು ತಹಶೀಲ್ದಾರ್ ಮಹಾಬಲೇಶ್ವರ್ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿದ್ದು, ಎಲ್ಲರೂ ಮಾನವೀಯ ಮೌಲ್ಯದಡಿಯಲ್ಲಿ ಸೇನಾ ಮನೋಭಾವ ಹೆಚ್ಚಿಸಿಕೊಂಡು ನಿಸ್ವಾರ್ಥದಿಂದ ಕೆಲಸ ಮಾಡಬೇಕಿದೆ ಎಂದರು.
ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಸದಸ್ಯ ನಟರಾಜ್ ಮಾತನಾಡಿ, ಅನೇಕ ದಾನಿಗಳು ತುರ್ತು ಚಿಕಿತ್ಸಾ ವಾಹನಗಳನ್ನು ಉಚಿತ ಸೇವೆಗೆ ನೀಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಸದುಪಯೋಗ ಪಡೆದುಕೊಂಡು ಸೋಂಕಿತರ ನೆರವಿಗೆ ಸಹಕಾರಿಯಾಗಬೇಕಿದೆ. ಖಾಸಗಿ ತುರ್ತು ಚಿಕಿತ್ಸಾ ವಾಹನದ ಮಾಲೀಕರು ಸಾರ್ವಜನಿಕ ಆಸ್ಪತ್ರೆ ಮುಂದೆ ಸೋಂಕಿತರ ಸಂಕಷ್ಟದ ಕಾಲದಲ್ಲಿ ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.
ಸೇವಾಭಾರತಿ ಪ್ರಮುಖರಾದ ಆನಂದ್, ವಿನೀತ್, ಪಾಂಡುರಂಗ, ಜಯಪ್ರಕಾಶ, ಬಿಜೆಪಿ ಮುಖಂಡರಾದ ಕೆ.ಎಂ. ತಿಮ್ಮಪ್ಪ, ಕೆ.ಕೆ. ರಮೇಶ್, ಸತೀಶ್ ಟಿ.ಕೆ. ರಾಜು, ಮಾದಪ್ಪ , ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು, ಮಂಜುನಾಥ್ ಸ್ಮರಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.