ತುಮಕೂರು: ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಬಿ.ಸುರೇಶ್ಗೌಡ ಅವರನ್ನು ಮಂಗಳವಾರ ನಗರದ ಕೆ.ಆರ್.ಬಡಾವಣೆಯಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂಗುಚ್ಚ ನೀಡಿ ಸ್ವಾಗತಿಸಿದರು.
ಭಾರತೀಯ ಜನತಾ ಸಂಘದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ದಿನ ಮತ್ತು ಬಿಜೆಪಿ ಹಿರಿಯ ಮುಖಂಡರಾದ ಜಗನ್ನಾಥ್ ರಾವ್ ಜೋಷಿಯವರ ಜನ್ಮದಿನ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
‘ಜಿಲ್ಲೆಯಾದ್ಯಂತ ಪ್ರವಾಸಮಾಡಿ ಪಕ್ಷವನ್ನು ಸಂಘಟಿಸುವ ಮೂಲಕ ಮುಂಬರುವ 11 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು. ಗ್ರಾ.ಪಂ, ಜಿ.ಪಂ ಚುನಾವಣೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಖಂಡರು, ಕಾರ್ಯಕರ್ತರು ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕು, ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳ ಜನಪ್ರಿಯ ಯೋಜನೆಗಳ ಬಗ್ಗೆ ಮನೆ ಮನೆಗೂ ಪ್ರಚಾರ ಮಾಡಬೇಕು ಎಂದರು.
ಮುಖಂಡರಾದ ಸೊಗಡು ಶಿವಣ್ಣ, ಡಾ.ಜಿ.ವೆಂಕಟರಾಮಯ್ಯ, ಎಂ.ಬಿ.ನಂದೀಶ್, ಲಕ್ಷ್ಮೀಶ್, ರಂಗಾನಾಯ್ಕ್ ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ನೂತನ ಅಧ್ಯಕ್ಷರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಮುಖಂಡರಾದ ಗೂಳೂರು ಶಿವಕುಮಾರ್, ಬಿ.ಕೆ.ಮಂಜುನಾಥ್, ಲಕ್ಷ್ಮಿನಾರಾಯಣ, ವೈ.ಎಚ್.ಹುಚ್ಚಯ್ಯ, ಬೆಳಗುಂಬ ನರಸಿಂಹಮೂರ್ತಿ, ಡಾ.ನಾಗರಾಜ್, ಟಿ.ಆರ್.ಅನಸೂಯಮ್ಮ, ಊರುಕೆರೆ ಷಣ್ಮುಖಪ್ಪ, ವೇದಮೂರ್ತಿ, ಕೊಪ್ಪಳ್ ನಾಗರಾಜ್, ಟಿ.ಆರ್.ಸದಾಶಿವಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.