ADVERTISEMENT

ನಮ್ಮೂರ ತಿಂಡಿ: ಎಲ್ಲರ ನೆಚ್ಚಿನ ‘ದತ್ತಣ್ಣ ಹೋಟೆಲ್‌’

ಸೌದೆ ಒಲೆಯಲ್ಲಿ ಆಹಾರ ತಯಾರಿ, ಕಡಿಮೆ ದರದಲ್ಲಿ ತಿಂಡಿ ಪೂರೈಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 3:33 IST
Last Updated 15 ಸೆಪ್ಟೆಂಬರ್ 2024, 3:33 IST
ಕೊರಟಗೆರೆ ಪಟ್ಟಣದ ದುರ್ಗಾ ಪರಮೇಶ್ವರಿ ಹೋಟೆಲ್‌
ಕೊರಟಗೆರೆ ಪಟ್ಟಣದ ದುರ್ಗಾ ಪರಮೇಶ್ವರಿ ಹೋಟೆಲ್‌   

ಕೊರಟಗೆರೆ: ಕಡಿಮೆ ಬೆಲೆಗೆ ವಿವಿಧ ಬಗೆಯ ತಿಂಡಿ, ಊಟ ಉಣಬಡಿಸುವ ಪಟ್ಟಣದ ದುರ್ಗಾ ಪರಮೇಶ್ವರಿ ಹೋಟೆಲ್‌ (ದತ್ತಣ್ಣ ಹೋಟೆಲ್‌) ಎಲ್ಲರ ಅಚ್ಚುಮೆಚ್ಚಾಗಿದ್ದು, ಸದಾ ಜನರಿಂದ ತುಂಬಿರುತ್ತದೆ.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರುಗಡೆ ಹೋಟೆಲ್‌ ಇದ್ದು, ನಗರಕ್ಕೆ ಬರುವವರು ಇಲ್ಲಿ ಹಾಜರಾತಿ ಹಾಕಿ ಮುಂದಿನ ಕೆಲಸಕ್ಕೆ ಹೋಗುತ್ತಾರೆ. ‘ದತ್ತಣ್ಣ ಹೋಟೆಲ್‌’ ಎಂದೇ ಪ್ರಸಿದ್ಧಿ ಪಡೆದಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಹೋಟೆಲ್‌ ತೆರೆದಿರುತ್ತದೆ. ಹೋಟೆಲ್‌ ಬಾಗಿಲು ತೆಗೆಯುವುದಕ್ಕೆ ಪಟ್ಟಣದ ಜನರು ಕಾಯುತ್ತಾರೆ. ಸ್ವಚ್ಛತೆ, ಗುಣಮಟ್ಟದ ಆಹಾರ ಪೂರೈಕೆಯಿಂದ ಹೋಟೆಲ್‌ ಆಹಾರ ಪ್ರಿಯರ ನೆಚ್ಚಿನ ತಾಣವಾಗಿದೆ.

ಬೆಳಿಗ್ಗೆ ತಿಂಡಿಗೆ ನಾನಾ ರೀತಿಯ ಖಾದ್ಯಗಳು ಸಿದ್ಧವಾಗಿರುತ್ತವೆ. ಇಡ್ಲಿ, ಪೂರಿ, ಪುಳಿಯೋಗರೆ, ಚಿತ್ರಾನ್ನ, ಪಲಾವ್‌, ರೈಸ್‌ ಬಾತ್‌ ಬೆಳಗಿನ ಮೆನು. ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರ್‌, ಮೊಸರನ್ನ ಸಿದ್ಧಪಡಿಸಲಾಗುತ್ತದೆ. ಸೌದೆ ಒಲೆಯಲ್ಲಿ ಎಲ್ಲ ರೀತಿಯ ಆಹಾರ ತಯಾರಿಸುವುದರಿಂದ ಹೆಚ್ಚಿನ ಜನರು ಹೋಟೆಲ್‌ಗೆ ಭೇಟಿ ನೀಡುತ್ತಾರೆ.

ADVERTISEMENT

ಶಾಲಾ–ಕಾಲೇಜು ವಿದ್ಯಾರ್ಥಿಗಳು, ನಾನಾ ಕೆಲಸಕ್ಕಾಗಿ ದೂರದ ಊರುಗಳಿಂದ ಪಟ್ಟಣಕ್ಕೆ ಬಂದವರು ದತ್ತಣ್ಣ ಹೋಟೆಲ್‌ನಲ್ಲಿ ತಿಂಡಿ ಸವಿದು ಮುಂದೆ ಸಾಗುತ್ತಾರೆ.

ಹೋಟೆಲ್‌ ಮಾಲೀಕ ದತ್ತಾತ್ರೆಯ ಅವರ ತಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಉದ್ಯೋಗ ಅರಸಿ ಪಟ್ಟಣಕ್ಕೆ ಬಂದು ರಸ್ತೆಯ ಪಕ್ಕದಲ್ಲಿ ಒಂದು ಚಿಕ್ಕ ಹೋಟೆಲ್‌ ಶುರು ಮಾಡಿದರು. ಈಗ ಅದು ಬೃಹತ್‌ ಉದ್ಯಮವಾಗಿ ಬೆಳೆದಿದೆ. ಬಿ.ಕಾಂ, ಬಿ.ಲಿಬ್‌ ವಿದ್ಯಾಭ್ಯಾಸ ಪೂರ್ಣಗೊಳಿಸಿದ ದತ್ತಾತ್ರೇಯ ತಂದೆ ಶುರು ಮಾಡಿದ ಹೋಟೆಲ್‌ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.