ADVERTISEMENT

ಚುರುಕುಗೊಂಡ ಕೃಷಿ ಚಟುವಟಿಕೆ

ಚಿಂತಾಮಣಿ ತಾಲ್ಲೂಕಿನಲ್ಲಿ 33,118 ಹೆಕ್ಟೆರ್‌ ಭೂಮಿಯಲ್ಲಿ ಬಿತ್ತನೆಯ ಗುರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:03 IST
Last Updated 5 ಜೂನ್ 2020, 11:03 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಬಳಿ ಭೂಮಿಯನ್ನು ಹದಗೊಳಿಸಲಾಯಿತು
ಚಿಂತಾಮಣಿ ತಾಲ್ಲೂಕಿನ ಕೈವಾರದ ಬಳಿ ಭೂಮಿಯನ್ನು ಹದಗೊಳಿಸಲಾಯಿತು   

ಚಿಂತಾಮಣಿ: ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದು ರೈತರು ಲಘುಬಗೆಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎರಡು ವಾರದಿಂದ ಅಲ್ಲಲ್ಲಿ ಮಳೆ ಬೀಳುತ್ತಿದ್ದು, ಮಾಗಿ ಉಳುಮೆ ಮಾಡಿ ಜಮೀನಿನಲ್ಲಿ ಬಿದ್ದಿದ್ದ ಕಸಕಡ್ಡಿಯನ್ನು ಭೂಮಿಗೆ ಸೇರಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಜನವರಿಯಿಂದ ಜೂನ್ 3ರವರೆಗೆ 126.05 ಮಿ.ಮೀ ವಾಡಿಕೆ ಮಳೆ ಬೀಳಬೇಕಿತ್ತು. ಆದರೆ 106.8 ಮಿ.ಮೀ ಮಳೆಯಾಗಿದೆ. 19.25 ಮಿ.ಮೀ ಮಳೆ ಕೊರತೆಯಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 33,118 ಹೆಕ್ಟೆರ್‌ ಭೂಮಿಯಲ್ಲಿ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ರಾಗಿ, ತೊಗರಿ, ನೆಲಗಡಲೆ, ಮುಸುಕಿನ ಜೋಳ, ಅವರೆ, ಅಲಸಂದಿ ಪ್ರಮುಖ ಬೆಳೆಗಳು.

ರಾಗಿ 16,145 ಹೆಕ್ಟೆರ್‌, ಮುಸುಕಿನ ಜೋಳ 3,898, ಭತ್ತ 718 ಹೆಕ್ಟೆರ್‌ ಸೇರಿದಂತೆ ಒಟ್ಟು 20,771 ಹೆಕ್ಟೆರ್‌ ಪ್ರದೇಶದಲ್ಲಿ ಏಕದಳ ಧಾನ್ಯ ಬಿತ್ತನೆ ಗುರಿ ಇದೆ.

ನೆಲಗಡಲೆ 7,983 ಹೆಕ್ಟೆರ್‌, ಎಳ್ಳು, ಸಾಸಿವೆ, ಹುಚ್ಚೆಳ್ಳು ಸೇರಿದಂತೆ ಒಟ್ಟು 7,983 ಹೆಕ್ಟೆರ್‌ ಪ್ರದೇಶದಲ್ಲಿ ಎಣ್ಣೆಕಾಳು ಬಿತ್ತನೆಯಾಗುವ ಸಾಧ್ಯತೆ ಇದೆ. ತೊಗರಿ 2,658 ಹೆಕ್ಟೆರ್‌, ಅವರೆ 1,200 ಹೆಕ್ಟೆರ್‌, ಅಲಸಂದಿ 264, ಹುರುಳಿ 167 ಹೆಕ್ಟೆರ್‌ ಬಿತ್ತನೆಯ ಗುರಿ ಇದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ತೊಗರಿ, ನೆಲಗಡಲೆ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ರಾಗಿ 106 ಕ್ವಿಂಟಲ್, ತೊಗರಿ 36.6 ಕ್ವಿಂಟಲ್, ನೆಲಗಡಲೆ 597 ಕ್ವಿಂಟಲ್ ಬಿತ್ತನೆ ಬೀಜಗಳು ತಾಲ್ಲೂಕಿಗೆ ಸರಬರಾಜಾಗಿವೆ.

ಕೈವಾರ, ಕಸಬಾ, ಅಂಬಾಜಿದುರ್ಗಾ, ಮುರುಗಮಲ್ಲ, ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿನ ಬೀಜಗಳನ್ನು ವಿತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.