ADVERTISEMENT

ರೈತರ ಹೋರಾಟ ಹತ್ತಿಕ್ಕುವ ಹುನ್ನಾರ

ತಿಪಟೂರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 5:30 IST
Last Updated 9 ಡಿಸೆಂಬರ್ 2020, 5:30 IST
ತಿಪಟೂರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು
ತಿಪಟೂರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು   

ತಿಪಟೂರು: ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್‌ ತಾಲ್ಲೂಕಿನಲ್ಲಿ ಪ್ರತಿಭಟನೆಗೆ ಸೀಮಿತವಾಗಿತ್ತು.

ನಗರದ ತಾಲ್ಲೂಕು ಕಚೇರಿಯ ಮುಂಭಾಗ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ಪ್ರಾಂತ್ಯ ರೈತ ಸಂಘ, ಜನಸ್ಪಂದನಾ ಟ್ರಸ್ಟ್, ಸೌಹಾರ್ದ ತಿಪಟೂರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಯೋಗೀಶ್ವರಸ್ವಾಮಿ ಮಾತನಾಡಿ, ‘ದೇಶದ ಶೇ 70ರಷ್ಟು ರೈತರು ಕೃಷಿ ನಂಬಿ ಬದುಕುತ್ತಿದ್ದಾರೆ. ಕೃಷಿ ಸಂಬಂಧಿಸಿದ ಕಾಯ್ದೆ ರೂಪಿಸುವಾಗಿ ರೈತರ ಅಗತ್ಯತೆ ಅರಿತು ರಚಿಸಬೇಕು. ಆದರೆ ರೈತರನ್ನು ದಿನಗೂಲಿ ಕೆಲಸದವರಂತೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದರು.

ADVERTISEMENT

ಭೈರನಾಯಕನಹಳ್ಳಿ ಮನೋಹರ್ ಪಟೇಲ್ ಮಾತನಾಡಿ, ‘ಕಾಯ್ದೆಗಳನ್ನು ಓದಿ ಅರ್ಥ ಮಡಿಕೊಳ್ಳುವ ಶಕ್ತಿ ರೈತರಿಗೂ ಇದೆ. ಕೇವಲ ಸರ್ಕಾರದ ಸ್ವರ್ಥಕ್ಕಾಗಿ ರಚಿತವಾಗಿರುವ ಕಾಯ್ದೆ, ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ರೈತರು ಹೋರಾಡುತ್ತಲೇ ಇರುತ್ತಾರೆ. ಪ್ರತಿಭಟನೆ ಹತ್ತಿಕ್ಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ’ ಎಂದರು.

ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ‘ಜನಸಾಮಾನ್ಯರಿಗೆ, ಕೆಲ ರೈತರಿಗೆ ಕೇಂದ್ರದ ಕಾಯ್ದೆ ಬಗ್ಗೆ ಅರಿವಾಗಿಲ್ಲ. ತಾಲ್ಲೂಕಿನ ಮಟ್ಟಿಗೆ ತೊಂದರೆ ಎಂದರೆ ಕೊಬ್ಬರಿಗೆ ಇರುವ ಬೆಂಬಲ ಬೆಲೆ ₹10,300. ನೂತನ ಎಪಿಎಂಸಿ ಕಾಯ್ದೆ ಜಾರಿಯಾದರೆ ಇದು ಇರುವುದಿಲ್ಲ. ಜತೆಗೆ ಬೆಲೆ ಕಡಿಮೆಯಾದರೆ ನಾಫೆಡ್ ಕೂಡ ಪ್ರಾರಂಭಿಸುವುದಿಲ್ಲ. ಆಗ ಕೇವಲ ವರ್ತಕರು, ರವಾನೆದಾರರು ನಿಗದಿ ಮಾಡುವ ದರಕ್ಕೆ ರೈತರು ಕೊಬ್ಬರಿ ಕೊಡುವಂತಾಗುತ್ತದೆ’ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಆರ್‌ಕೆಎಸ್‍ ಲೋಕೇಶ್, ಡಿಎಸ್‌ಎಸ್ ಈಚನೂರು ಮಹದೇವ್, ನಾಗತೀಹಳ್ಳಿ ಕೃಷ್ಣಮೂರ್ತಿ, ಟಿ.ಕೆ.ಕುಮಾರ್, ಕೃಷ್ಣಮೂರ್ತಿ, ಶ್ರೀಕಾಂತ್, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಬಿ.ಎಸ್.ಅನಸೂಯ, ಮಮತಾ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯೆಕ್ಷೆ ಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.