ADVERTISEMENT

ಹಸಿದವರಿಗೆ ಅನ್ನ ನೀಡುವ ಕೈಗಳು

ನಿರ್ಗತಿಕರು, ಭಿಕ್ಷುಕರು ಸೇರಿದಂತೆ ಹಸಿವಿನಿಂದ ಕಂಗಾಲಾದವರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 11:06 IST
Last Updated 31 ಮಾರ್ಚ್ 2020, 11:06 IST
ಪೊಲೀಸರಿಗೆ ಊಟ ವಿತರಿಸುತ್ತಿರುವ ಶುಭೋದಯ ತಂಡದ ಸದಸ್ಯರು
ಪೊಲೀಸರಿಗೆ ಊಟ ವಿತರಿಸುತ್ತಿರುವ ಶುಭೋದಯ ತಂಡದ ಸದಸ್ಯರು   

ತುಮಕೂರು: ನಿರ್ಗತಿಕರು, ಭಿಕ್ಷುಕರು ಸೇರಿದಂತೆ ಹಸಿವಿನಿಂದ ಕಂಗಾಲಾದವರಿಗೆ ನಗರದ ಹಲವು ಸಂಘ ಸಂಸ್ಥೆಗಳು, ಸಹೃದಯಿಗಳು ಅನ್ನ ಉಣಬಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ನಿಷ್ಕಾಮ ಕೆಲಸದ ಮೂಲಕ ಹಲವು ಮಂದಿಯಿಂದ ಕೃತಜ್ಞತೆಗೆ ಪಾತ್ರರಾಗುತ್ತಿದ್ದಾರೆ. ಹೀಗೆ ತೊಡಗಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಸ್ನೇಹಿತರು, ಸಮಾನ ಮನಸ್ಕರು, ಕಷ್ಟಗಳಿಗೆ ತುಡಿಯುವ ಮನಸ್ಸುಳ್ಳವರು ಪರಸ್ಪರ ಒಗ್ಗೂಡಿ ಈ ಕಾರ್ಯದಲ್ಲಿ ತೊಡಗುತ್ತಿದ್ದಾರೆ.

ವೀರಶೈವ: ಅನಾಥರು, ನಿರ್ಗತಿಕರು ಹಾಗೂ ಕೆಲಸದಲ್ಲಿ ನಿರತರಾಗಿರುವ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಗೆ ನಗರ ವೀರಶೈವ ಸಮಾಜ ಸೇವಾ ಸಮಿತಿ ಆಹಾರ ವಿತರಣೆಗೆ ಮುಂದಾಗಿದೆ.

ADVERTISEMENT

ಜೆ.ಸಿ.ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಹಾರ ತಯಾರಿಸಿ ನಿತ್ಯ 2,500 ಜನರಿಗೆ ಆಹಾರ ಒದಗಿಸಲು ಸಜ್ಜಾಗಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಈ ಆಹಾರ ವಿತರಣೆಗೆ ಕ್ರಮಕೈಗೊಂಡಿದೆ. ಮಾಹಿತಿಗೆ 0816-2274846, ಅಧ್ಯಕ್ಷರು 9448404722 ಅಥವಾ ಕಾರ್ಯದರ್ಶಿ 9880996169 ಸಂಪರ್ಕಿಸಬಹುದು.

ಶುಭೋದಯ ತಂಡ: ತಂಡವು ನಗರದ ವಿವಿಧ ಸ್ಥಳಗಳಲ್ಲಿ ಉಚಿತ ಆಹಾರ ಮತ್ತು ನೀರಿನ ಬಾಟಲ್‌ಗಳನ್ನು ವಿತರಿಸಿತು. ಗುಬ್ಬಿ ಗೇಟ್ ಬಳಿಯ ಲಾಡ್ಜ್‌ನಲ್ಲಿ ಆಶ್ರಯ ಪಡೆದಿರುವ ವಲಸೆ ಕಾರ್ಮಿಕರು ಮತ್ತು ಬಟ್ಟೆ ವ್ಯಾಪಾರಿಗಳಿಗೆ, ಹಿರೇಹಳ್ಳಿ ಚೆಕ್ ಪೋಸ್ಟ್ ಬಳಿ ಕೆಲಸದಲ್ಲಿ ತೊಡಗಿರುವ ಪೊಲೀಸರಿಗೆ, ಕಾಲ್ನಡಿಗೆಯಲ್ಲಿ ಬೇರೆ ಸ್ಥಳಗಳಿಗೆ ಹೊರಟಿದ್ದ ಜನರಿಗೆ ಆಹಾರ ಪೊಟ್ಟಣಗಳು ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಡೆಲ್ಟಾ ರವಿ ನೇತೃತ್ವದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರವೀಶ್ ಕುಮಾರ್, ಉದ್ಯಮಿ ನಾಗರಾಜು, ಕಾಂತರಾಜು ಪಾಲ್ಗೊಂಡಿದ್ದರು.

ತುಮಕೂರಿನ ವಿವಿಧ ವಾರ್ಡ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಾನಗರ ಪಾಲಿಕೆಯ ಹೊರಗುತ್ತಿಗೆ ಕಾರ್ಮಿಕರಿಗೆ ಹಾಗೂ ಊರಿಗೆ ಹೋಗಲು ಸಾಧ್ಯವಾಗದಿರುವ ಉತ್ತರ ಕರ್ನಾಟಕ ಭಾಗಗಳ ವಿದ್ಯಾರ್ಥಿಗಳಿಗೆ ಮಾಜಿ ಶಾಸಕ ಡಾ.ರಫೀಕ್‍ ಅಹಮದ್ ಅವರ ಬೆಳಗಿನ ಉಪಾಹಾರ ನೀಡಿದರು.

ರಫೇಲ್: ತುಮಕೂರಿನ ರಫೇಲ್ ಯುವಕರ ಪಡೆ ಸದಸ್ಯರು ನಗರದಾದ್ಯಂತ ಸಂಚರಿಸಿ ಮಧ್ಯಾಹ್ನ‌ ಊಟ ನೀಡಿದರು. ಆಹಾರ ತಯಾರಿಕೆಯಲ್ಲಿ ಸುರಕ್ಷಾ ಕ್ರಮ ಕೈಗೊಂಡಿರುವ ಯುವಕರ ತಂಡ ಸಿದ್ಧಗಂಗಾ ಆಸ್ಪತ್ರೆಯಲ್ಲಿರುವ ಪೌಷ್ಟಿಕ ಅಹಾರ ತಯಾರಿಸುವ ‘ಫುಡ್ ಮೆನು’ ಎನ್ನುವ ಕ್ಯಾಂಟೀನ್‌ಗೆ ಆಹಾರ ತಯಾರಿಕೆ ಜವಾಬ್ದಾರಿವಹಿಸಿದೆ.

ತರಕಾರಿ ಮಾರುಕಟ್ಟೆಯವರೂ ಕೈಲಾದ ಸಹಾಯ ಮಾಡುತ್ತಿದ್ದಾರೆ. ಮೊದಲು 20 ಜನರಿಗೆ ಊಟದ ವ್ಯವಸ್ಥೆ ಮಾಡಿದ ತಂಡ ಈಗ ನಿತ್ಯ 250 ಜನರಿಗೆ ಊಟ ಕೊಡುತ್ತಿದೆ‌. ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ, ಶುಚಿತ್ವದ ಬಗ್ಗೆ ತಿಳಿ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.