ಕುಣಿಗಲ್: ರಾಗಿ ಖರೀದಿ ಕೇಂದ್ರಕ್ಕೆ ತಂದು ಹಾಕಿದ ರಾಗಿ ಹಣಕ್ಕಾಗಿ ರೈತರು ಪರದಾಡುವಂತಾಗಿದ್ದು, ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ರೈತರಿಗೆ ಸಹಾಯ ಮಾಡಬೇಕು ಎಂದು ಎಪಿಎಂಸಿ ನಿರ್ದೇಶಕರು ಮನವಿ ಮಾಡಿದ್ದಾರೆ.
ಎಪಿಎಂಸಿ ನಿರ್ದೇಶಕರಾದ ಮಲ್ಯ ನಾಗರಾಜು, ವಡ್ಡರಕುಪ್ಪೆ ನಾಗರಾಜು, ಕುಂಬಳಕಾಯಿ ರಾಜಣ್ಣ ಮತ್ತು ಸುರೇಶ್ ಜಂಟಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಂಬಲಬೆಲೆಯಲ್ಲಿ ರಾಗಿ ಖರೀದಿಕೇಂದ್ರ ಪ್ರಾರಂಭಿಸಲಾಗಿತ್ತು. ತಾಲ್ಲೂಕಿನ ನೂರಾರು ರೈತರು ಸಾವಿರಾರು ಕ್ವಿಂಟಲ್ ರಾಗಿಯನ್ನು ತಂದು ಹಾಕಿದ್ದರು. ಕೆಲವರಿಗೆ ದಾಖಲೆ ನೀಡಲಾಗಿದೆ, ಮತ್ತೆ ಕೆಲವರಿಗೆ ದಾಖಲೆಗಳನ್ನು ನೀಡಲಾಗಿಲ್ಲ.
ರೈತರಿಂದ ಪಡೆದ ರಾಗಿ ಬಗ್ಗೆ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದೆ 2500 ಕ್ವಿಂಟಲ್ ರಾಗಿಯನ್ನು ಖರೀದಿ ಕೇಂದ್ರದ ಅಧಿಕಾರಿ ಜವರಯ್ಯ, ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಿದರು.
ಕಷ್ಟಪಟ್ಟು ಬೆಳೆದ ರಾಗಿಗೆ ಬೆಂಬಲ ಬೆಲೆ ಪಡೆಯಲು ರೈತರು ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿ ಕೈತೊಳೆದುಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಕೈತೊಳೆದು ಕೊಂಡಿದ್ದಾರೆ. ಈಗ ಅಧಿಕಾರಿಗಳಿಗೆ ಚುನಾವಣೆ ಕಾರ್ಯ. ಆದರೆ, ರೈತರದ್ದು ಮಾತ್ರ ರಾಗಿ ಹಣಕ್ಕಾಗಿ ಅಲೆದಾಟ ತಪ್ಪಿಲ್ಲ ಎಂದು ತಿಳಿಸಿರುವ ನಿರ್ದೇಶಕರು, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರಾಗಿ ಬೆಳೆಗಾರರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ತಾಲ್ಲೂಕಿನ ರೈತರು ರಾಗಿ ಖರೀದಿ ಕೇಂದ್ರಕ್ಕೆ ತಂದು ಹಾಕಿದ್ದ ರಾಗಿಯ ವಿವರಗಳ ದಾಖಲೆಯನ್ನು ತಂದು ಇದೇ 30ರೊಳಗೆ ಎಪಿಎಂಸಿ ಕಚೇರಿಗೆ ಕೊಡಬೇಕು ಎಂದು ಮನವಿ ಮಾಡಿದ ನಿರ್ದೇಶಕರು ಸಮಗ್ರ ಮಾಹಿತಿ ಸಂಗ್ರಹಿಸಿ, ರೈತರಿಗೆ ನ್ಯಾಯ ದೊರಕಿಸಿಕೊಡಲು ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.