ತಿಪಟೂರು: ನಗರದ ಪ್ರತಿಷ್ಠಿತ ಬ್ಯಾಂಕ್ವೊಂದರ ಮ್ಯಾನೇಜರ್ ಗ್ರಾಹಕರ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆನಗರ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದ ಶಾಂತಕುಮಾರ್ ಅವರ ಸಾಲದ ಬಾಬ್ತು ಜಮೆ ಮಾಡುವಂತೆ ಡಿಸೆಂಬರ್ 22ರಂದು ಹಣವನ್ನು ಮ್ಯಾನೇಜರ್ ಕೊಟ್ಟಿದ್ದರು. ಡಿಸೆಂಬರ್ 24 ಆದರೂ ಖಾತೆಗೆ ಹಣ ವರ್ಗಾವಣೆ ಆಗಿರಲಿಲ್ಲ. ಮ್ಯಾನೇಜರ್ಗೆ ಕೇಳಿದರೆ ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ಮ್ಯಾನೇಜರ್ ನಾಪತ್ತೆ: ಮ್ಯಾನೇಜರ್ ಪತ್ನಿ ಡಿಸೆಂಬರ್ 23ರಂದು ಪತಿ ಕಾಣೆಯಾಗಿದ್ದಾರೆ ಎಂದು ನಗರಠಾಣೆಯಲ್ಲಿ ದೂರು ದಾಖಲಿಸಿದ್ದರು. 31ರಂದು ಮ್ಯಾನೇಜರ್ ಠಾಣೆಗೆ ಹಾಜರಾಗಿದ್ದಾರೆ. ವಿಷಯ ತಿಳಿದ ಅನೇಕ ಗ್ರಾಹಕರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ತಮಗೂ ಇವರಿಂದ ಅನ್ಯಾಯವಾಗಿದೆ. ನಮ್ಮಿಂದಲೂ ವೈಯಕ್ತಿಕವಾಗಿ ಹಣ ಪಡೆದು ವರ್ಗಾವಣೆ ಮಾಡದೇ ವಂಚಿಸಿದ್ದಾರೆ ಎಂದು ಆರೋಪಸಿದ್ದಾರೆ.
ಹಣ ಜಮೆಗೆ ಕಾಲಾವಕಾಶ ಕೋರಿದ ಮ್ಯಾನೇಜರ್ ಐದಾರು ಗ್ರಾಹಕರಿಗೆ ಮುಂದಿನ ದಿನಾಂಕದ ಚೆಕ್ (ಪೋಸ್ಟ್ ಡೇಟೆಡ್ ಚೆಕ್) ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ನಗರಠಾಣೆಯಲ್ಲಿ ₹29 ಲಕ್ಷ ವಂಚನೆಯ ಪ್ರಕರಣ ದಾಖಲಾಗಿದೆ. ತನಿಖೆ ನಡೆಸುತ್ತಿರುವುದಾಗಿ ನಗರಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ತಿಳಿಸಿದ್ದಾರೆ.
ಹಣ ವರ್ಗಾವಣೆ ಸಂಬಂಧಿಸಿದಂತೆ ಕೆಲ ಸಮಸ್ಯೆಯಾಗಿದ್ದು, ಹಣ ಹೊಂದಿಸಲು ಹೊಗಿದ್ದೆ. ಯಾರಿಗೂ ಮೋಸ ಮಾಡುವ ಉದ್ದೇಶ ಇಲ್ಲ. ಸ್ವಲ್ಪ ತಡವಾಗಿರುವುದು ಹಣ ಕೊಟ್ಟಿರುವವರಿಗೆ ಚೆಕ್ ನೀಡಿದ್ದೇನೆ ಎಂದು ಮ್ಯಾನೇಜರ್ ಠಾಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.