ADVERTISEMENT

ಬಲಗೊಳ್ಳುತ್ತಿದೆ ಜಾತಿ ವ್ಯವಸ್ಥೆ, ವಿಜೃಂಭಿಸುತ್ತಿದೆ ಕೋಮುವಾದ: ಜಿ. ಪರಮೇಶ್ವ‌ರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 4:39 IST
Last Updated 9 ನವೆಂಬರ್ 2023, 4:39 IST
ಶಿರಾ ತಾಲ್ಲೂಕಿನ ಬರಗೂರಿನಲ್ಲಿ ಬುಧವಾರ ನಡೆದ ನಾಡೋಜ ಡಾ.ಬರಗೂರು ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಗೌರವಿಸಲಾಯಿತು. ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಶಾಸಕರಾದ ಟಿ.ಬಿ.ಜಯಚಂದ್ರ, ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಇದ್ದರು
ಶಿರಾ ತಾಲ್ಲೂಕಿನ ಬರಗೂರಿನಲ್ಲಿ ಬುಧವಾರ ನಡೆದ ನಾಡೋಜ ಡಾ.ಬರಗೂರು ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಗೌರವಿಸಲಾಯಿತು. ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಶಾಸಕರಾದ ಟಿ.ಬಿ.ಜಯಚಂದ್ರ, ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಇದ್ದರು   

ಶಿರಾ: ‘ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಜಾತಿ ವ್ಯವಸ್ಥೆ ಮತ್ತಷ್ಟು ಬಲವಾಗುತ್ತಿದ್ದು, ಕೋಮುವಾದ ವಿಜೃಂಭಿಸುತ್ತಿರುವುದು ನೋವಿನ ಸಂಗತಿ. ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗಿದರೆ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವ‌ರ ಹೇಳಿದರು.

ತಾಲ್ಲೂಕಿನ ಬರಗೂರು ಆಂಜನೇಯ ಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಬೆಂಗಳೂರಿನ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಡೆದ ನಾಡೋಜ ಡಾ.ಬರಗೂರು ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಮತ್ತು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಹಿಂದುಳಿದ ಹಳ್ಳಿಯಲ್ಲಿ ಶೋಷಿತ ಸಮುದಾಯದಲ್ಲಿ ಹುಟ್ಟಿ ಬೆಳೆದ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಚಿಂತನೆ, ಬರವಣಿಗೆ, ನೇರ ಮಾತಿನ ಮೂಲಕ ದೇಶದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ವಿಚಾರ, ಚಿಂತನೆ ಸಮಾಜದ ಶ್ರೇಯಸ್ಸಿಗೆ, ಬದಲಾವಣೆಗೆ ದಿಕ್ಸೂಚಿ. ಯುವಜನತೆಗೆ ಅವರು ಆದರ್ಶವಾಗಬೇಕು ಎಂದು ಹೇಳಿದರು.

ADVERTISEMENT

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಬರಗೂರು ರಾಮಚಂದ್ರಪ್ಪ ಎಂದಿಗೂ ಸ್ವಾರ್ಥಕ್ಕಾಗಿ ಸ್ವಾಭಿಮಾನ ಬಿಟ್ಟುಕೊಡಲಿಲ್ಲ. ನೇರ ನಿಷ್ಠುರವಾದಿಯಾದ ಅವರು ಸಮಾಜಕ್ಕೆ ತನ್ನದೇ ಅದ ಆದರ್ಶಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ‌.ಜಯಚಂದ್ರ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದ ಬರಗೂರು ರಾಮಚಂದ್ರಪ್ಪ ರಾಜ್ಯದ ಗಮನ ಸೆಳೆದಿದ್ದು ಅವರ ವಿಚಾರ, ಚಿಂತನೆ ರಾಜ್ಯದಲ್ಲಿ ಬೆಳಗುವಂತಾಗಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ಈ ರಾಜ್ಯದ ಆಸ್ತಿ. ಅವರ ಹೆಸರಲ್ಲಿ ಸಾಂಸ್ಕೃತಿಕ ಕೇಂದ್ರ ಪ್ರಾರಂಭಿಸಿರುವುದು ಸಂತಸದ ವಿಷಯ. ಇದರಿಂದಾಗಿ ಯುವ ಜನತೆಯಲ್ಲಿ ಸಾಹಿತ್ಯ ಪ್ರೇಮ ಬೆಳೆಸಲು ಅನುಕೂಲವಾಗುವುದು ಎಂದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಗ್ರಾ.ಪಂ ಅಧ್ಯಕ್ಷೆ ಮಂಜುಳ ಭೀಮಣ್ಣ, ಉಪವಿಭಾಗಾಧಿಕಾರಿ ರಿಷಿ ಆನಂದ್, ಕಸಾಪ ಅಧ್ಯಕ್ಷ ಪಾಂಡುರಂಗಯ್ಯ, ವೀರಭದ್ರಸ್ವಾಮಿ, ಮುಖಂಡರಾದ ಹಲುಗುಂಡೇಗೌಡ, ಪರಮೇಶ್ ಗೌಡ, ಸತೀಶ್, ತಿಮ್ಮನಹಳ್ಳಿ ವೇಣುಗೋಪಾಲ್, ನರೇಶ್ ಬಾಬು, ರೂಪೇಶ್ ಕೃಷ್ಣಯ್ಯ ಇದ್ದರು.

ಭಾಷೆ ಸಂಸ್ಕೃತಿಯ ಅರಿವು ಮೂಡಿಸಲಿ

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ ಹುಟ್ಟೂರಿನಲ್ಲಿ ಸಾಂಸ್ಕೃತಿಕ ಕೇಂದ್ರ ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ. ರಾಜ್ಯಮಟ್ಟದ ಈ ಕೇಂದ್ರ ಸಾಮಾಜಿಕ ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗಿ ಯುವಜನತೆಯಲ್ಲಿ ಭಾಷೆ ಸಾಹಿತ್ಯ ಸಂಸ್ಕೃತಿ ಸ್ಥಳೀಯ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಬುಧವಾರ ನಡೆದ ನಾಡೋಜ ಡಾ.ಬರಗೂರು ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಮತ್ತು ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಸಚಿವರಾದ ಡಾ.ಜಿ.ಪರಮೇಶ್ವರ್ ಕೆ.ಎನ್.ರಾಜಣ್ಣ ಶಾಸಕರಾದ ಟಿ.ಬಿ.ಜಯಚಂದ್ರ ಚಿದಾನಂದ ಎಂ.ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.