ಹುಳಿಯಾರು: ಹೋಬಳಿ ವ್ಯಾಪ್ತಿಯ ಹೊಯ್ಸಳಕಟ್ಟೆ ಭಾಗದ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಎಲ್ಪಿಜಿ ಗ್ಯಾಸ್ ಲೈನ್ಗೆ ರೈತರ ವಿರೋಧದ ನಡುವೆಯೂ ಸ್ವಾಧೀನ ಪಡಿಸಿಕೊಂಡರೆ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.
ಹಾಸನದಿಂದ ಹೈದರಾಬಾದ್ಗೆ ಭೂಮಿಯೊಳಗೆ ಎಲ್ಪಿಜಿ ಗ್ಯಾಸ್ ಲೈನ್ ಅಳವಡಿಸಲು ಎಚ್ಪಿಸಿಎಲ್ ಕಂಪನಿ ಯೋಜನೆ ರೂಪಿಸಿದೆ. ಈ ಯೋಜನೆಯು ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸುತ್ತಲಿನ ಗ್ರಾಮಗಳಾದ ಲಕ್ಕೇನಹಳ್ಳಿ, ಕಲ್ಲೇನಹಳ್ಳಿ, ದಬ್ಬಗುಂಟೆ ಗ್ರಾಮಗಳ ರೈತರ ಜಮೀನಿನಲ್ಲಿ ಹಾದು ಹೋಗುತ್ತದೆ. ಆದರೆ ಕಂಪನಿಯು ರೈತರ ಭೂಮಿಯ ಉಪಯೋಗದ ಹಕ್ಕನ್ನು ರೈತರ ವಿರೊಧದೊಂದಿಗೆ ಮುಂದುವರೆಸಿದೆ. ವಶಪಡಿಸಿಕೊಳ್ಳುವ ಜಮೀನಿಗೆ ಹಣ ನೀಡುವ ಬಗ್ಗೆ ಯಾವುದೇ ಪಾರದರ್ಶಕ ಮಾಹಿತಿ ನೀಡದೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಹೊಯ್ಸಳಕಟ್ಟೆ ಗೇಟ್ನಲ್ಲಿ ಬುಧವಾರ ನಡೆಸಿದ ಸಭೆಯ ನಂತರ ತಿಳಿಸಿದರು.
ಭೂ ಸ್ವಾಧೀನ ಪಡಿಸಿಕೊಳ್ಳುವ ರೈತರಿಗೆ ನಿಖರ ಮಾಹಿತಿ ನೀಡದೆ ಒಂದೊಂದು ದಿನ ಒಂದೊಂದು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ರೈತರಲ್ಲಿ ಗೊಂದಲವೇರ್ಪಟ್ಟಿದೆ. ಮೊದಲು ರೈತರಿಗೆ ನೋಟಿಸ್ ನೀಡಿ ಆಕ್ಷೇಪಣಾ ಅರ್ಜಿ ನೀಡುವಂತೆ ತಿಳಿಸಿದ್ದರು. ಆಕ್ಷೇಪಣಾ ಪತ್ರ ನೀಡುವ ಮೊದಲೇ ಹುಳಿಯಾರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು. ಒಂದೇ ಬಾರಿ ಎಲ್ಲ ರೈತರನ್ನು ಸೇರಿಸಿ ಸಭೆ ಮಾಡದೆ ಕೇವಲ ಹತ್ತು ಮಂದಿಯನ್ನು ಮಾತ್ರ ಕೊಠಡಿಗೆ ಕರೆದು ಸಭೆಯ ಹಾಜರಾತಿಗೆ ಮಾತ್ರ ಸಹಿ ಪಡೆಯುತ್ತಿದ್ದೇವೆ ಎಂದು ತಿಳಿಸಿ ಸಹಿ ಪಡೆದರು. ಆದರೆ ಈಗ ಅಂದು ಪಡೆದ ಸಹಿಯೇ ಒಪ್ಪಂದದ ಸಹಿ ಎಂದು ಹೇಳುತ್ತಿದ್ದಾರೆ ಎಂದು ರೈತ ಮುಖಂಡ ಡಿ.ಬಿ.ರವಿಕುಮಾರ್ ಆರೋಪಿಸಿದರು.
ರೈತಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ರೈತರ ಜಮೀನಿನಲ್ಲಿರುವ ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳು ಹಾಗೂ ಖುಷ್ಕಿ ಜಮೀನಿಗೆ ಪ್ರತ್ಯೇಕ ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಎಲ್.ಬಿ.ಮಂಜುನಾಥ್, ಲ.ಪು.ಕರಿಯಪ್ಪ, ಈರಣ್ಣ, ಎಲ್.ಕೆ.ಈರಪ್ಪ, ಪ್ರಸನ್ನಕುಮಾರ್, ಲೋಕೇಶ್, ಹನುಮೇಶ್, ಕಲ್ಲೇನಹಳ್ಳಿ ಮಂಜುನಾಥ್, ಮರೆನಡುಪಾಳ್ಯದ ಕುಮಾರ್, ರಾಜಣ್ಣ, ರೈತಸಂಘದ ನಾಗರಾಜು, ಮರುಳಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.