ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘವು ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ನಗರದ ಅಮಾನಿಕೆರೆಯ ಗಾಜಿನ ಮನೆ ಹತ್ತಿರ ಸಮಾವೇಶಗೊಂಡ ಗ್ರಾಮ ಪಂಚಾಯಿತಿ ನೌಕರರು ತಾಲ್ಲೂಕು ಪಂಚಾಯಿತಿ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಮುಖಂಡ ಸೈಯದ್ ಮುಜೀಬ್ ಅವರು, ನೌಕರರ ಬಾಕಿ ಉಳಿದ ವೇತನವನ್ನು ನೀಡಲು ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ಜತೆಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ಗಳಿಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ಪಂಚಾಕ್ಷರಿ ಮಾತನಾಡಿ, ಪ್ರತಿಯೊಬ್ಬ ನೌಕರರಿಗೆ ಆರೋಗ್ಯ ಕಾರ್ಡ್ ನೀಡಿ, 1252 ಗ್ರೇಡ್ 2 ಪಂಚಾಯಿತಿಗಳನ್ನು ಗ್ರೇಡ್ 1 ಆಗಿಸಿ ಮೇಲ್ದರ್ಜೆಗೇರಿಸಬೇಕು. ವರ್ಷಕ್ಕೆ 20 ದಿನಗಳ ಗಳಿಕೆ ರಜೆ, ಭಾನುವಾರ ಕೆಲಸ ಮಾಡುವುದಕ್ಕೆ ಹೆಚ್ಚುವರಿ ವೇತನ ಅಥವಾ ರಜೆ ನೀಡಬೇಕು. ನಿವೃತ್ತಿ ಉಪಧನ (ಗ್ರಾಚ್ಯುಟಿ), ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಸೇವಾ ನಿಯಮಾವಳಿಗಳನ್ನು ಅಂತಿಮಗೊಳಿಸಬೇಕು ಎಂದು ಕೋರಿದರು.
ಎಂ.ಎಸ್.ಸ್ವಾಮಿ ಅವರ ವರದಿಯಂತೆ 5998 ಬಿಲ್ ಕಲೆಕ್ಟರ್ ಹುದ್ದೆಗಳ ಸೃಷ್ಟಿಸಬೇಕು, ಕಿರುನೀರು ಪೂರೈಕೆ ಹಾಗೂ ಕೊಳವೆ ಬಾವಿ ನೀರು ಸ್ಥಾವರಗಳಿಗೆ ಅನುಗುಣವಾಗಿ 16 ಸಾವಿರ ಹುದ್ದೆಗಳನ್ನು ಸೃಷ್ಠಿಸಬೇಕು, ಕಸಗುಡಿಸುವ ಹುದ್ದೆ ಸೃಷ್ಠಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನಾಕಾರರು ತಾಲ್ಲೂಕು ಪಂಚಾಯಿತಿ ಇಓ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.