ಪಾವಗಡ: ತಾಲ್ಲೂಕಿನ ಮುಗದಾಳಬೆಟ್ಟ ಗೊಲ್ಲರಹಟ್ಟಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ರೈತರು, ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ನಿಡಗಲ್ ಹೋಬಳಿ ಮುಗದಾಳ ಬೆಟ್ಟ ಗ್ರಾಮದ ಸರ್ವೆ ನಂ 166/1 ರಲ್ಲಿ ಮುಗದಾಳ ಬೆಟ್ಟ ಗೊಲ್ಲರಹಟ್ಟಿ ಯಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಬಗ್ಗೆ ಜುಲೈ 31ರಂದು ಮಧುಗಿರಿ ನ್ಯಾಯಾಲಯದಲ್ಲಿ ಮುಗದಾಳಬೆಟ್ಟ ಗೊಲ್ಲರ ಹಟ್ಟಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ನ್ಯಾಯಾಲಯ ಆದೇಶ ನೀಡಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ತಿಳಿಸಿದರು.
ತಾಲ್ಲೂಕಿನ 4 ಹೋಬಳಿಯ ಅರ್ಹ ಫಲಾನುಭವಿಗಳು ಬಗರ್ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ವರ್ಷ ಕಳೆದರೂ ಜಮೀನು ಮಂಜೂರು ಮಾಡಿಲ್ಲ. ಇದುವರೆಗೂ ಬಗರ್ ಹುಕುಂ ಸಮಿತಿ ಮಾಡದೇ, ಸಾರ್ವಜನಿಕರಿಗೆ ಸಣ್ಣ ಭೂ ಹಿಡುವಳಿದಾರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಈ ಕೂಡಲೇ ಶಾಸಕರು, ತಹಶೀಲ್ದಾರರು ಸಭೆ ಕರೆದು ಬಗರ್ ಹುಕುಂ ಅಡಿ ಅರ್ಜಿ ಹಾಕಿರುವ ಭೂರಹಿತ ಬಡವರಿಗೆ ಭೂಮಿ ಮಂಜೂರು ಮಾಡಿಕೊಡಬೇಕು. ಮುಗದಾಳಬೆಟ್ಟ ಗೊಲ್ಲರಹಟ್ಟಿಯಲ್ಲಿ ಮನೆಗಳ ನಿರ್ಮಾಣದ ಜೊತೆ ರಸ್ತೆ, ಚರಂಡಿ, ಅಂಗನವಾಡಿ ಇತರೆ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಶಿವು, ನರಸಪ್ಪ, ಚಿತ್ತಯ್ಯ, ರಾಮಾಂಜಿ, ಈರಣ್ಣ, ಲಕ್ಷ್ಮಿದೇವಮ್ಮ ಗುಡಿಪಲ್ಲಪ್ಪ, ದಾಸಣ್ಣ, ದುರ್ಗಪ್ಪ, ನರಸಪ್ಪ, ಹನುಮಂತರಾಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.