ಕೋರ: ಕೆಲ ಕಂದಾಯ ವೃತ್ತಗಳಲ್ಲಿ ನೂರಾರು ಎಕರೆ ಗೋಮಾಳ ಹಾಗೂ ಅರಣ್ಯ ಭೂಮಿಯನ್ನು ಬಗರ್ಹುಕುಂ ಹೆಸರಿನಲ್ಲಿ ಪ್ರಭಾವಿಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೋಬಳಿಯ ಶಂಭೋನಹಳ್ಳಿ ಗ್ರಾಮದ ಸರ್ವೇ ನಂಬರ್ 39ರಲ್ಲಿ ಗೋಮಾಳ, 40, 41ರಲ್ಲಿಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶವಿದೆ. ಇಲ್ಲಿನ ಕೆಲ ಪ್ರಭಾವಿಗಳು ಈ ಭೂಮಿಯನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಅಕ್ರಮವಾಗಿ ಖಾತೆಯನ್ನು ಮಾಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಕಂದಾಯ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು.
ಈ ಭೂಮಿಯ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ವಿವಾದ ನಡಿದಿತ್ತು. ಅಂತಿಮವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿದಾರರಿಗೆ ನೋಟಿಸ್ ನೀಡಿದ್ದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಈ ಕಡೆ ಸುಳಿದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೆಳಧರ ಗ್ರಾಮಪಂಚಾಯಿತಿಯ ನರಸೀಪುರ ಗ್ರಾಮದಲ್ಲಿ 24 ಎಕರೆ ಅರಣ್ಯ ಭೂಮಿಯಿದೆ. ಸ್ಥಳೀಯರು ಅಲ್ಲಿದ್ದ ಮರಗಳನ್ನು ನಾಶಪಡಿಸಿ ಭೂಮಿಯನ್ನು ಸಾಗುವಳಿಗೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸ್ಥಳೀಯರೊಬ್ಬರು ಎರಡು ಬಾರಿ ತಹಶೀಲ್ದಾರ್ಗೆ ದೂರು ನೀಡಿದ್ದರು. ಆದಾಗ್ಯೂ ತಹಶೀಲ್ದಾರರು ಸ್ಥಳ ಪರಿಶೀಲಿಸಿಲ್ಲ. ಒತ್ತುವರಿ ತೆರವುಗೊಳಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.