ADVERTISEMENT

ತುಮಕೂರು: ಇಲಾಖೆಗಳ ನಡುವೆ ಸಮನ್ವಯದ ಕೊರತೆ: ಸಂಸದ ಜಿ.ಎಸ್.ಬಸವರಾಜ್ ಅಸಮಾಧಾನ

ಆದರ್ಶ ಗ್ರಾಮ ಯೋಜನೆಯ ವ್ಯಾಪ್ತಿಯ ಸಂಘ ಸಂಸ್ಥೆಗಳ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 14:25 IST
Last Updated 16 ಆಗಸ್ಟ್ 2020, 14:25 IST
ಜಿ.ಎಸ್.ಬಸವರಾಜ್‌
ಜಿ.ಎಸ್.ಬಸವರಾಜ್‌   

ತುಮಕೂರು: ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ತಾಜಾ ಮಾಹಿತಿಗಳ ಸಂಗ್ರಹದ ಕೊರತೆ ಇಲಾಖೆಗಳಲ್ಲಿ ಎದ್ದು ಕಾಣುತ್ತಿದೆ. ಇದಕ್ಕೆ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೇ ಪ್ರಮುಖ ಕಾರಣ. ಈ ಕೊರತೆ ನೀಗಿಸುವ ಜವಾಬ್ಧಾರಿಯನ್ನು ‘ದಿಶಾ’ ಸಮಿತಿಗೆ ನೀಡಲಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.

ನಗರದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆ ವ್ಯಾಪ್ತಿಯ ಸಂಘ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ, ಪ್ರತಿಯೊಂದು ಇಂಚು ಭೂ ಬಳಕೆಯ ಹಾಗೂ ಪ್ರತಿಯೊಬ್ಬ ವ್ಯಕ್ತಿಗೆ ಸಂಬಂಧಿಸಿದ ಜಿಐಎಸ್ ಆಧಾರಿತ ಅಭಿವೃದ್ಧಿ ಮಾಹಿತಿಗಳನ್ನು ‘ತುಮಕೂರು ಜಿಐಎಸ್’ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲು ಆರಂಭಿಸಲಾಗಿದೆ ಎಂದು ಹೇಳಿದರು.

ಒಂದೇ ಜಿಐಎಸ್ ನಕ್ಷೆಯಲ್ಲಿ ಎಲ್ಲ ಇಲಾಖೆಗಳು ಮಾಹಿತಿ ಅಪ್‌ಲೋಡ್ ಮಾಡುವ ಮಹತ್ವದ ಯೋಜನೆಗೆ 2022ರ ಕಾಲಮಿತಿ ಗಡುವು ನಿಗದಿಗೊಳಿಸಲಾಗಿದೆ ಎಂದರು.

ADVERTISEMENT

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕೆಲವು ಯೋಜನೆಗಳಿಗೆ ಹಣ ಅಗತ್ಯವಿದ್ದರೆ, ಹಲವು ಯೋಜನೆಗಳು ಇರುವ ಆರ್ಥಿಕ ಸಂಪನ್ಮೂಲಗಳ ಅಡಿಯಲ್ಲಿ ಪ್ರಗತಿ ಸಾಧಿಸಬಹುದು. ಇದಕ್ಕೆ ಅಧಿಕಾರಿಗಳಲ್ಲಿ ಬದ್ಧತೆ ಇರಬೇಕು. ಜನರೂ ಪಾಲುದಾರರಾಗಬೇಕು ಎಂದು ಹೇಳಿದರು.

ಸಭೆಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಗುರುಸಿದ್ದಪ್ಪ, ಪರಮಶಿವಯ್ಯ, ಚಂದ್ರಪ್ಪ, ವಿವಿಧ ಗ್ರಾಮ ಪಂಚಾಯಿತಿಗಳನ್ನು ಪ್ರತಿನಿಧಿಸಿದ್ದ ತುಂಡೋಟಿ ನರಸಿಂಹಯ್ಯ, ಶಿವರುದ್ರಯ್ಯ, ಪುಟ್ಟ ಶಾಮಯ್ಯ, ವೀರೇಂದ್ರ ಪಾಟೀಲ್, ಗುರುಪ್ರಸಾದ್, ಉಮಾ ಮಹೇಶ್, ಚಿದಾನಂದ್, ನೇತ್ರಾನಂದ್ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.