ADVERTISEMENT

ಹಳ್ಳಿಕಾರ ಸಮುದಾಯಕ್ಕೆ 6 ಎಕರೆ ಜಾಗ: ಸಚಿವ ಡಿ.ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:11 IST
Last Updated 27 ಜುಲೈ 2025, 5:11 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ಆರ್.ಎಂ.ಆರ್.ಹಳ್ಳಿಕಾರ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.</p></div>

ತುಮಕೂರಿನಲ್ಲಿ ಶನಿವಾರ ಆರ್.ಎಂ.ಆರ್.ಹಳ್ಳಿಕಾರ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

   

ತುಮಕೂರು: ಹಿರಿಯೂರು ಮತ್ತು ಚಳ್ಳಕೆರೆ ಭಾಗದಲ್ಲಿ ಹಳ್ಳಿಕಾರ ಸಮುದಾಯಕ್ಕೆ 6 ಎಕರೆ ಜಾಗ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ಆರ್.ಎಂ.ಆರ್.ಹಳ್ಳಿಕಾರ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಹಳ್ಳಿಕಾರ ಸಮುದಾಯದ‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಾಣಕ್ಕೆ ಹಿರಿಯೂರು ಬಳಿ 3 ಎಕರೆ, ಚಳ್ಳಕೆರೆ ಹತ್ತಿರ 3 ಎಕರೆ ಮೀಸಲಿಡಲಾಗುವುದು. ಆರ್.ಎಂ.ಆರ್.ಹಳ್ಳಿಕಾರ ಫೌಂಡೇಶನ್ ಟ್ರಸ್ಟ್‌ಗೆ ಜಾಗ ನೀಡಲಾಗುವುದು. ಸರ್ಕಾರದಿಂದ ಪೂರಕವಾದ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಸಮಾಜದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಶ್ಲಾಘನೀಯ. ಮನುಷ್ಯನ ಬದುಕಿಗೆ ಶಿಕ್ಷಣ ಅತ್ಯವಶ್ಯಕ. ಬಹಳ ಪುಟ್ಟ ಸಮುದಾಯ ಆದರೂ ಸ್ವಾಭಿಮಾನದ ಸಮಾಜ.‌ ದುಡಿಮೆಯ ಜತೆಗೆ ಇನ್ನೊಬ್ಬರಿಗೆ ಸಹಾಯ ಮಾಡುವ ವ್ಯಕ್ತಿತ್ವ ಇರುವ ಜನ ಎಂದರು.

ಶಾಸಕ ಟಿ.ರಘುಮೂರ್ತಿ, ‘ಜೀವನ ರೂಪಿಸಿಕೊಳ್ಳಲು ಶಿಕ್ಷಣ ಮುಖ್ಯ. ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂಬುವುದು ಪೋಷಕರ ಕನಸಾಗಿರುತ್ತದೆ. ವಿದ್ಯಾರ್ಥಿಗಳು ಇದನ್ನು ಅರಿತು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜದ ಮುನ್ನೆಲೆಗೆ ಬರಬೇಕು’ ಎಂದು ಆಶಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ‘ಒಂದು ಕುಟುಂಬದ ಕಡೆಯಿಂದ ಸಾವಿರಾರು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ವಿಶೇಷ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಪೋಷಕರು ಮಕ್ಕಳ ಪ್ರತಿಭೆ ಮೊಟಕು ಮಾಡಬಾರದು. ಸಮುದಾಯದ ನಾಯಕರು ಶಾಲೆಗಳನ್ನು ಆರಂಭಿಸಬೇಕು’ ಎಂದು ಸಲಹೆ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಸಂಜಯ್ ಜಯಚಂದ್ರ, ಹನುಮಕ್ಕ, ನಾರಾಯಣಮೂರ್ತಿ, ಮಹಾಲಿಂಗಯ್ಯ, ಪತ್ರಕರ್ತ ಎಸ್‌.ನಾಗಣ್ಣ ಮೊದಲಾದವರು ಭಾಗವಹಿಸಿದ್ದರು.

ಸ್ಪರ್ಧಾತ್ಮಕ ಪರೀಕ್ಷೆಗೆ ನೆರವು

ಪದವಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳ ಯುಪಿಎಸ್‌ಸಿ ಪರೀಕ್ಷೆ ತಯಾರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆರ್.ಎಂ.ಆರ್.ಹಳ್ಳಿಕಾರ ಫೌಂಡೇಶನ್‌ ಟ್ರಸ್ಟ್‌ ಅಧ್ಯಕ್ಷ ಕೆ.ಎಂ.ನಾಗರಾಜ್ ಹೇಳಿದರು.

ವಿದ್ಯಾರ್ಥಿಗಳು ಆಸಕ್ತಿ ಶ್ರದ್ಧೆಯಿಂದ ಕಲಿಯಬೇಕು. ಮನೆಯಲ್ಲಿ ಒಬ್ಬರು ವಿದ್ಯಾವಂತರಾದರೆ ಇಡೀ ಕುಟುಂಬದ ಚಿತ್ರಣವೇ ಬದಲಾಗುತ್ತದೆ.‌ ಎಲ್ಲರು ಚೆನ್ನಾಗಿ ಓದಿ ಮುಂದೆ ಬರಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.