ಕೊಡಿಗೇನಹಳ್ಳಿ: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರೈತರು ಹಿಪ್ಪುನೇರಳೆ ನಾಟಿ ಮಾಡಿ ರೇಷ್ಮೆ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದು ಎಂದು ರೇಷ್ಮೆ ಉಪ ನಿರ್ದೇಶಕ ಟಿ.ಲಕ್ಷ್ಮೀನರಸಯ್ಯ ತಿಳಿಸಿದರು.
ಪುರವರ ಹೋಬಳಿ ಬ್ಯಾಲ್ಯ ಗ್ರಾಮದಲ್ಲಿ ನಡೆದ ರೇಷ್ಮೆ ಗುಂಪು ಸಭೆಯಲ್ಲಿ ಅವರು ಮಾತನಾಡಿದರು.
ಒಂದು ಎಕರೆಯಲ್ಲಿ 4×4 ಅಂತರದಲ್ಲಿ ನಾಟಿ ಮಾಡಿದಲ್ಲಿ ಕೂಲಿವೆಚ್ಚ ಮತ್ತು ಸಾಮಗ್ರಿ ವೆಚ್ಚ ಸೇರಿ ₹60,000 ಸೌಲಭ್ಯ ಪಡೆಯಬಹುದಾಗಿದೆ. ಜಿಲ್ಲೆಯು ದ್ವಿತಳಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ ಮಂಚೂಣಿಯಲ್ಲಿದ್ದು, ಹಾಲಿ ರೇಷ್ಮೆ ಗೂಡಿನ ದರ ಪ್ರತಿ ಕ್ವಿಂಟಲ್ಗೆ ₹50,000ದಿಂದ ₹65,000 ಇದೆ. ಸಮಗ್ರ ಕೃಷಿ ಪದ್ಧತಿಯಲ್ಲಿ ರೇಷ್ಮೆ ಬೆಳೆದಲ್ಲಿ ರೈತರು ಆರ್ಥಿಕ ಸ್ವಾವಲಂಬನೆ ಪಡೆಯಬಹುದಾಗಿದೆ. ಇಲಾಖೆಯಿಂದ ರೇಷ್ಮೆ ಹುಳು ಸಾಕಣೆ, ಮನೆ, ಹನಿ ನೀರಾವರಿ ಘಟಕಗಳಿಗೆ ಹಾಗೂ ಹುಳು ಸಾಕಣೆ ಸಲಕರಣೆಗಳಿಗೆ ಸಹಾಯಧನ ನೀಡಲಾಗುವುದು. ದ್ವಿತಳಿ ಬೆಳೆಗಾರರಿಗೆ ಉಚಿತ ಸೋಂಕು ನಿವಾರಕಗಳನ್ನು ಇಲಾಖೆಯಿಂದ ವಿತರಿಸಲಾಗುವುದು ಎಂದು ವಿವರಿಸಿದರು.
ರೇಷ್ಮೆ ವಿಸ್ತರಣಾಧಿಕಾರಿ ವೀರಣ್ಣ, ರೇಷ್ಮೆ ನಿರೀಕ್ಷಕ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಹಾಗೂ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.