ತುಮಕೂರು: ಸರಳವಾಗಿ ಬದುಕಿ ಇತರರಿಗೆ ಮಾದರಿಯಾದ ಡಾ.ಎಚ್.ನರಸಿಂಹಯ್ಯ ಅವರು ಕಂದಾಚಾರಗಳ ವಿರುದ್ಧ ಪ್ರಬಲ ಧ್ವನಿ ಎತ್ತಿದರು. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು ಎಂಬ ಸಂದೇಶ ಸಾರಿದ ನಾಡಿನ ಶ್ರೇಷ್ಠ ಗಾಂಧಿವಾದಿ ಎಂದು ಪರಿಸರ ಹೋರಾಟಗಾರ ಸಿ.ಯತಿರಾಜು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ಡಾ.ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಅವರ ಆದರ್ಶಗಳನ್ನು ಪರಿಪಾಲಿಸಿದವರು ವಿರಳ. ಡಾ.ಎಚ್.ಎನ್. ಎಂದೂ ಗಾಂಧಿ ತತ್ವಗಳಿಗೆ ವಿರುದ್ಧ ನಡೆಯಲಿಲ್ಲ. ನರಸಿಂಹಯ್ಯ ಅವರು ಬೆಳೆದ ಹಾದಿ ಅತ್ಯಂತ ಕಷ್ಟವಾದುದು ಎಂದು, ನರಸಿಂಹಯ್ಯ ಅವರ ಬದುಕಿನ ಘಟನೆಗಳನ್ನು ಸ್ಮರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಸಾಮಾನ್ಯ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಮೌಢ್ಯದ ವಿರುದ್ಧ ಪ್ರಶ್ನಿಸುವುದನ್ನು ಕಲಿಸಿದವರು ಡಾ.ಎಚ್.ನರಸಿಂಹಯ್ಯ. ಇಂತಹವರನ್ನು ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಇಂದು ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನವೂ ಆಗಿದೆ. ಸಣ್ಣ ಕಥಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ರಾಕ್ಲೈನ್ ರವಿಕುಮಾರ್, ರಾಣಿ ಚಂದ್ರಶೇಖರ್, ಮಂಜುಳಾದೇವಿ, ಪಂಡಿತ್ ಜವಾಹರ್,ಪುಷ್ಪರಂಗನಾಥ್, ಪಾರ್ವತಮ್ಮ ರಾಜಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.