ADVERTISEMENT

ನೀರು ಕೊಡದಿದ್ದರೆ ತಕ್ಕ ಉತ್ತರ: ಬಿ.ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 2:28 IST
Last Updated 15 ಆಗಸ್ಟ್ 2021, 2:28 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ಈ ಹಿಂದೆ ನೀಡಿದ್ದ ಭರವಸೆಯಂತೆ ಶಿರಾ ತಾಲ್ಲೂಕು ಮದಲೂರು ಕೆರೆಗೆ ಹೇಮಾವತಿಯಿಂದ ನೀರು ಹರಿಸಬೇಕು. ಇಲ್ಲವಾದರೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ ಇಲ್ಲಿ ಶನಿವಾರ ಅಸಮಾಧಾನ ಹೊರ ಹಾಕಿದರು.

‘ಶಿರಾ ಉಪಚುನಾವಣೆ ಸಮಯದಲ್ಲಿ ನೀರು ಹರಿಸುವುದಾಗಿ ಅಲ್ಲಿನ ಜನರಿಗೆ ಹೇಳಿದ್ದೇವೆ. ಅದರಂತೆ ಬಿಡಬೇಕಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಸರಿಯಾದ ಪಾಠ ಕಲಿಸುತ್ತಾರೆ. ಆ ಬಗ್ಗೆ ನಮಗೆ ಎಚ್ಚರ ಇರಬೇಕು’ ಎಂದು ತಮ್ಮದೇ ಪಕ್ಷದ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಮದಲೂರು ಕೆರೆಗೆ ನೀರು ಹರಿಸಲು ಕಾನೂನು ತೊಡಕುಗಳಿದ್ದರೆ, ನೀರು ಹಂಚಿಕೆ ಆಗದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೇ ಪರಿಹರಿಸಬೇಕು. ಅವರೇ ಕಾನೂನು ಸಚಿವರಾಗಿದ್ದು, ನಿಯಮಗಳು ಗೊತ್ತಿವೆ. ಕಾನೂನು ತೊಡಕುಗಳನ್ನು ನಿವಾರಿಸಿ ನೀರು ಬಿಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೂ ಅಧ್ಯಕ್ಷರನ್ನು ನೇಮಕ ಮಾಡಬೇಕು. ಕೊಟ್ಟ ಭರವಸೆಯಿಂದ ಹಿಂದೆ ಸರಿಯಬಾರದು. ಈ ಬಗ್ಗೆ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರ ಜತೆಗೂ ಚರ್ಚಿಸಲಾಗುವುದು ಎಂದು ಹೇಳಿದರು.

ಮುಖಂಡ ಎಂ.ಆರ್.ಹುಲಿನಾಯ್ಕರ್, ‘ನೂತನ ಸಚಿವರನ್ನು ಪರಿಚಯಿಸುವ ಜನಾಶೀರ್ವಾದ ಯಾತ್ರೆ ಆರಂಭಿಸಲಾಗುತ್ತಿದ್ದು, ಇದೇ 17ರಂದು ಜಿಲ್ಲೆಗೆ ಬರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತದೆ. ಸಚಿವರು ನ್ಯಾಯಬೆಲೆ ಅಂಗಡಿ, ಲಸಿಕಾ ಕೇಂದ್ರಕ್ಕೆ ಭೇಟಿನೀಡಿ ಪರಿಶೀಲಿಸಲಿ
ದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಹೊಸ ಸಚಿವರನ್ನು ಪರಿಚಯಿಸಲು ಮುಂದಾದರೂ ವಿರೋಧ ಪಕ್ಷಗಳು ಅವಕಾಶ ಮಾಡಿಕೊಡದೆ ಗದ್ದಲ ನಡೆಸಿದವು. ಹಾಗಾಗಿಜನಾಶೀರ್ವಾದ ಯಾತ್ರೆ ಮೂಲಕ ಸಚಿವರನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಮುಖಂಡರಾದ ಎಂ.ಬಿ.ನಂದೀಶ್, ಹೆಬ್ಬಾಕ ರವಿ, ಲಕ್ಷ್ಮೀಶ್, ಕೊಪ್ಪಲ್ ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.