ಹುಲಿಯೂರುದುರ್ಗ: ‘ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಹಾಲಿನ ಪೂರೈಕೆ ಆಗಬೇಕಾದರೆ ಹಾಲನ್ನು ಕರೆದ ಕ್ಷಣದಿಂದ ತಂಪಾಗಿಡುವುದು ಅವಶ್ಯಕವಾಗಿದೆ. ಇದಕ್ಕಾಗಿ ಹಾಲು ಸಂಗ್ರಹಣಾ ಶಿಥಲೀಕರಣ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಲಾಗುತ್ತಿದೆ’ ಎಂದು ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್ ಹೇಳಿದರು.
ಹೋಬಳಿಯ ಹಳೇವೂರು, ಬಂಡಿಹಳ್ಳಿ ಹಾಗೂ ಕೆಂಚನಹಳ್ಳಿ ಹಾಲು ಉತ್ಪಾದಕರ ಸಂಘಗಳಲ್ಲಿ ನಡೆದ ಬಿಎಂಸಿ ಘಟಕಗಳ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
‘ಕಠಿಣ ಸವಾಲುಗಳ ನಡುವೆಯೂ ಒಕ್ಕೂಟದ ಸ್ಥಿರತೆ ಕಾಪಾಡಿಕೊಳ್ಳಲಾಗಿದೆ. ಹಾಲು ಉತ್ಪಾದಕರಿಗೆ ಹಲವು ರೀತಿಯ ಸೌಲಭ್ಯ ಒದಗಿಸಲಾಗುತ್ತಿದೆ. ಸುಮಾರು ₹ 100 ಕೋಟಿ ಮೌಲ್ಯದ ಹಾಲಿನ ಪುಡಿ ಹಾಗೂ ಮೊಸರು ಸಂಗ್ರಹ ರೂಪದಲ್ಲಿದೆ. ಮಾರುಕಟ್ಟೆಯ ವಿಸ್ತರಣೆಗೆ ಒಕ್ಕೂಟದ ಕಾರ್ಯಕಾರಿ ಮಂಡಳಿ ಚಿಂತನೆ ನಡೆಸಿದೆ’ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ಹೇಳಿದರು.
ಒಕ್ಕೂಟದ ನಿರ್ದೇಶಕ ಡಿ. ಕೃಷ್ಣಕುಮಾರ್ ಮಾತನಾಡಿ, ‘ಕುಣಿಗಲ್ ತಾಲ್ಲೂಕಿನಲ್ಲಿ ಅತಿಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಮೆಗಾ ಡೇರಿ, ಪೌಡರ್ ಪ್ಲಾಂಟ್ ಸ್ಥಾಪಿಸುವ ಉದ್ದೇಶವಿದೆ. ಡೇರಿಗಳಲ್ಲಿನ ಆರ್ಥಿಕ ವ್ಯವಹಾರವು ಪೂರ್ಣವಾಗಿ ಬ್ಯಾಂಕ್ಗಳ ಮೂಲಕವೇ ಆಗುತ್ತಿದ್ದು ಯಾವುದೇ ವ್ಯತ್ಯಾಸಕ್ಕೆ ಆಸ್ಪದವಿಲ್ಲ. ಶಾಸಕರು ಮಾಹಿತಿ ತಿಳಿದುಕೊಂಡು ಮಾತನಾಡಬೇಕು’ ಎಂದು ಹೇಳಿದರು.
‘ಆಧುನಿಕ ತಂತ್ರಜ್ಞಾನ ಹಾಗೂ ಸ್ವಾಸ್ಥ್ಯ ಪಾಲನಾ ವಿಧಾನಗಳ ಮೂಲಕ ಸಾಂಪ್ರದಾಯಿಕ ಹೈನುಗಾರಿಕೆಯು ಸವಾಲುಗಳನ್ನು ಎದುರಿಸಬೇಕಾಗಿದೆ’ ಎಂದು ನಿರ್ದೇಶಕ ಎಸ್.ಆರ್. ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಕೊಂಡವಾಡಿ ಚಂದ್ರಶೇಖರ್, ಎಂ.ಕೆ. ಪ್ರಕಾಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.