ತುಮಕೂರು: ಒಕ್ಕಲಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದ್ದಾರೆ.
ರಾಜ್ಯದ ಜನಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ ಶೇ 15ರಷ್ಟು ಇದೆ ಎನ್ನುತ್ತವೆ ಅಂಕಿ ಅಂಶಗಳು. ಇಷ್ಟೊಂದು ದೊಡ್ಡ ಸಮುದಾಯಕ್ಕೆ ‘3ಎ’ನಲ್ಲಿ ಮೀಸಲಾತಿ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲಿರುವ ಉಳಿದ ಸಮುದಾಯಗಳಿಗೆ ಹಂಚಿಕೆಯಾಗಿ ನಮಗೆ ದೊರೆಯುವುದು ಶೇ 1ರಷ್ಟು ಮೀಸಲಾತಿ ಮಾತ್ರ. ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಏನೇನೂ ಸಾಲದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಒಕ್ಕಲಿಗ ಸಮುದಾಯದ ಕೆಲವು ಉಪಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಿಲ್ಲ. ಈ ಪಟ್ಟಿಗೆ ಸೇರಿಸಿ ಎಂದು ಕೇಳುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.
ಬಸವಣ್ಣ ಅವರ ಪ್ರಭಾವಕ್ಕೆ ಒಳಗಾಗಿ ತಳ ಸಮುದಾಯಗಳು ಲಿಂಗಧಾರಣೆ ಮಾಡಿದವು. ಅವರು ಲಿಂಗಾಯತರಾದರು. ಅಂದ ಮಾತ್ರಕ್ಕೆ ಅವರೂ ಮುಂದುವರಿದಿದ್ದಾರೆ ಎಂದಲ್ಲ. ಆ ಸಮುದಾಯಗಳಲ್ಲಿಯೂ ಕೆಲವು ಉಪಪಂಗಡಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಂತಹವರನ್ನು ಮುಖ್ಯವಾಹಿನಿಗೆ ತರುತ್ತೇವೆ ಎನ್ನುವುದರಲ್ಲಿ ತಪ್ಪೇನು ಇದೆ ಎಂದು ಹೇಳಿದ್ದಾರೆ.
ಒಕ್ಕಲಿಗರ ಅಭಿವೃದ್ಧಿ ನಿಗಮ ರಚಿಸಿ ₹ 1 ಸಾವಿರ ಕೋಟಿ ಕೊಡಿ ಎನ್ನುತ್ತಿದ್ದೇವೆ. ಕೇಳಿದ ತಕ್ಷಣ ಎಲ್ಲವನ್ನೂ ಮಾಡುತ್ತಾರೆ ಎಂದಲ್ಲ. ಆದರೆ ಕೇಳುವುದರಲ್ಲಿ ತಪ್ಪೇನಿದೆ. ವೀರಶೈವ ಲಿಂಗಾಯತರ ಅಭಿವೃದ್ಧಿ ನಿಗಮ ಆಗದಿದ್ದರೆ ನಮಗೂ ಕೇಳಲು ಮಜುಗರ ಆಗುತ್ತಿತ್ತು. ಈಗ ನಮ್ಮ ಸಮುದಾಯವನ್ನೂ ಗುರುತಿಸಿ ಎಂದು ಕೇಳುತ್ತಿದ್ದೇವೆ. ಆದರೆ ಇದನ್ನೇ ಅಪರಾಧ ಎನ್ನುವ ರೀತಿ ಬಿಂಬಿಸಿದರೆ ಹೇಗೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.