ADVERTISEMENT

ಒಕ್ಕಲಿಗರಿಗೂ ಮೀಸಲಾತಿ ಹೆಚ್ಚಿಸಿ: ಒತ್ತಾಯ

ಸರ್ಪ ಒಕ್ಕಲಿಗರ ವಿದ್ಯಾರ್ಥಿ ನಿಲಯದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:10 IST
Last Updated 8 ಮಾರ್ಚ್ 2021, 5:10 IST
ತುಮಕೂರಿನಲ್ಲಿ ಸರ್ಪ ಒಕ್ಕಲಿಗರ ಹಾಸ್ಟೆಲ್ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ನೆರವೇರಿಸಿದರು
ತುಮಕೂರಿನಲ್ಲಿ ಸರ್ಪ ಒಕ್ಕಲಿಗರ ಹಾಸ್ಟೆಲ್ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ನೆರವೇರಿಸಿದರು   

ತುಮಕೂರು: ಒಕ್ಕಲಿಗ ಸಮುದಾಯಕ್ಕೆ ಇನ್ನೂ ಹೆಚ್ಚಿನ ಮೀಸಲಾತಿ ನೀಡಬೇಕು ಎಂದು ಮಂಗಳನಾಥ ಸ್ವಾಮೀಜಿ ಇಲ್ಲಿ ಭಾನುವಾರ ಒತ್ತಾಯಿಸಿದರು.

ನಗರದ ಉಪ್ಪಾರಹಳ್ಳಿ– ಗೆದ್ದಲಹಳ್ಳಿ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಅಖಿಲ ಕರ್ನಾಟಕ ಸರ್ಪ ಒಕ್ಕಲಿಗ/ ಸಲುಪರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಬಡವರಿಗೆ ಶಿಕ್ಷಣ ಕೊಡಿಸಲು ಒಕ್ಕಲಿಗ ಸಮುದಾಯದ ಸ್ಥಿತಿವಂತರು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಬೇಕು. ರಾಜಕೀಯವಾಗಿ ಒಟ್ಟಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ನಮ್ಮ ಸಮಾಜವನ್ನು ಮುಂದೆ ತರಬೇಕು. ಎಲ್ಲರೂ ಒಗ್ಗೂಡಿ ಸಮುದಾಯದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಮಕ್ಕಳಿಗೆ ಜ್ಞಾನ‌ ನೀಡುವ ಕಾರ್ಯವನ್ನು ಸಮುದಾಯಗಳು ಮಾಡುವುದು ಅನುಕರಣೀಯ. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಸಹ ದೇವಾಲಯಗಳಿಗಿಂತ ಶಿಕ್ಷಣ ದೇಗುಲಗಳಿಗೆ ಆದ್ಯತೆ ನೀಡಿದ್ದಾರೆ. ಗುರುಗಳ ಮಾರ್ಗದರ್ಶನ, ಹಿರಿಯರ ಆಶಯದಂತೆ ಸಮಾಜ ಮುನ್ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಸಣ್ಣಪುಟ್ಟ ಸಮುದಾಯಗಳು ಸಂಘಟಿತರಾಗಿ ಶೈಕ್ಷಣಿಕವಾಗಿ ಮಕ್ಕಳಿಗೆ ಸಹಾಯವಾಗುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು. ಶೈಕ್ಷಣಿಕ ಸಂಸ್ಥೆ ಆರಂಭಿಸುವ ಬಗ್ಗೆ ಚಿಂತಿಸಬೇಕು’ ಎಂದು ಸಲಹೆ ಮಾಡಿದರು.

ಚಿಕ್ಕಪುಟ್ಟ ಸಮುದಾಯಗಳು ಜನರಿಂದ ದೇಣಿಗೆ ಸಂಗ್ರಹಿಸಲು ಶಕ್ತಿ ಇರುವುದಿಲ್ಲ. ಹಾಗಾಗಿ, ಸರ್ಕಾರದಿಂದ ಹೆಚ್ಚಿನ‌ ಅನುದಾನ ತರಬೇಕು. ಇದಕ್ಕೆ ಜನಪ್ರತಿನಿಧಿಗಳನ್ನು ಬಳಸಿಕೊಳ್ಳಬೇಕು. ಜನನಾಯಕರು ಇಂತಹ ಸಮುದಾಯಗಳ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.

ಒಕ್ಕಲಿಗ ಸಮುದಾಯ ಒಟ್ಟಾದರೆ ಹೆಚ್ಚಿನ ಶಕ್ತಿ ಬರಲಿದೆ. ಎಲ್ಲರೂ ಸಂಘಟಿತರಾಗಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಲು ಹಾಸ್ಟೆಲ್ ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನಂಜಾವಧೂತ ಸ್ವಾಮೀಜಿ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಸ್.ಎಲ್.ಭೋಜೇಗೌಡ, ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ರಫೀಕ್ ಅಹ್ಮದ್, ಅಖಿಲ ಕರ್ನಾಟಕ ಸರ್ಪ
ಒಕ್ಕಲಿಗ/ಸಲುಪರ ಸಂಘದ ಗೌರವಾ
ಧ್ಯಕ್ಷ ಮುರಗಪ್ಪಗೌಡ, ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಪ್ರಧಾನ ಕಾರ್ಯ
ದರ್ಶಿ ಎಸ್.ರಾಜಕುಮಾರ್ ಮಂಜು
ನಾಥ್ ಮತ್ತಿತರರು ಭಾಗವಹಿಸಿದ್ದರು.

ಹತ್ತು ಕೊಠಡಿ ಇರುವ ಸುಸಜ್ಜಿತ ಹಾಸ್ಟೆಲ್ ಕಟ್ಟಡದಲ್ಲಿ 50 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.