ತುಮಕೂರು: ಪ್ರಸ್ತುತ ದೇಶದ ಪರಿಸ್ಥಿತಿ ಗಮನಿಸಿದರೆ ಪರಿಶಿಷ್ಟರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿದೆ. ಹಿಂದೂ, ಮುಸ್ಲಿಂ ಹೆಸರಿನಲ್ಲಿ ಮತ್ತೊಮ್ಮೆ ದೇಶವನ್ನು ವಿಭಜಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ದಲಿತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹನುಮಂತ ಜೀ.ಯಳಸಂಗಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸೇನೆ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ರಾಮವಿಲಾಸ್ ಪಾಸ್ವಾನ್ ಅವರಿಗೆ ಶ್ರದ್ದಾಂಜಲಿ ಹಾಗೂ ದಲಿತ ಸೇನೆ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮನುವಾದಿಗಳು ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲಿಯೂ ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಅತ್ಯಾಚಾರ ಪ್ರಕರಣದ ಸಾಕ್ಷಿ ನಾಶ ಪಡಿಸಲು ಸರ್ಕಾರವೇ ಶಾಮೀಲಾಗಿರುವುದು ನಿಜಕ್ಕೂ ಈ ದೇಶದ ದುರಂತ ಎಂದರು.
ದಲಿತ ಸೇನೆ ಸಂಸ್ಥಾಪಕ ಅಧ್ಯಕ್ಷ ರಾಮ್ವಿಲಾಸ್ ಪಾಸ್ವಾನ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಸಚಿವರಾಗಿದ್ದರೂ ಎಂದಿಗೂ ತಾವು ನಂಬಿದ್ದ ಸಿದ್ದಾಂತ ಮತ್ತು ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಬಿಜೆಪಿ ಸರ್ಕಾರಕ್ಕೆ ಸದಾ ಎಚ್ಚರಿಕೆಯ ಗಂಟೆಯಾಗಿಯೇ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು.
ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬನಶಂಕರಿ ನಾಗು, ಜಿಲ್ಲಾ ಘಟಕದ ಅಧ್ಯಕ್ಷ ಗೂಳೂರು ಸಿದ್ದರಾಜು, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಖಾಲಿದ್ ಖಾನ್, ರಾಜ್ಯ ಉಪಾಧ್ಯಕ್ಷ ಪರಮೇಶ್ವರಪ್ಪ ಮಾತನಾಡಿದರು. ಮುಖಂಡರಾದ ಮುತ್ತಣ್ಣ, ಪಂಚಶೀಲ, ಮಲ್ಲಿಕಾ, ನಗೀನ, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ, ಸುಮಿತ್ರಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.