ತುಮಕೂರು: ಇ-ಖಾತೆ ಮಾಡಿಸಲು ಸಾರ್ವಜನಿಕರು ಪರದಾಡುತ್ತಿದ್ದು, ಮಹಾನಗರ ಪಾಲಿಕೆಯ ಇಡೀ ವಾತಾವರಣ ಕೆಟ್ಟು ಹೋಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಶಾಸಕರ ಕಾರ್ಯಾಲಯದಲ್ಲಿ ಶುಕ್ರವಾರ ಪಾಲಿಕೆಯ ಕಂದಾಯ ಶಾಖೆ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
ಅರ್ಜಿ ಸಲ್ಲಿಸಿ ಹಲವು ದಿನ ಕಳೆದರೂ ಅರ್ಜಿ ಸ್ಥಿತಿ ಏನೆಂದು ತಿಳಿಯಲು ಆಗುತ್ತಿಲ್ಲ. ತಿಂಗಳುಗಟ್ಟಲೆ ಅಲೆದಾಡಿಸಿ, ಒಂದು ದಾಖಲೆ ಸರಿ ಇಲ್ಲ ಎಂದು ಅರ್ಜಿ ತಿರಸ್ಕಾರ ಮಾಡಲಾಗುತ್ತಿದೆ. ಇಂತಹ ಸಾಕಷ್ಟು ದೂರುಗಳು ಬರುತ್ತಿವೆ. ಅಧಿಕಾರಿಗಳು ಆತ್ಮ ಸಾಕ್ಷಿಗೆ ಒಪ್ಪುವಂತಹ ಕೆಲಸ ಮಾಡಬೇಕು ಎಂದರು.
ಇ–ಖಾತೆ ಮಾಡಲು 3 ಜನ ಪ್ರಾದೇಶಿಕ ಆಯುಕ್ತರಿಗೆ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಅರ್ಜಿ ಸಲ್ಲಿಸಲು, ನಮೂನೆ-2 ಪಡೆಯಲು ಹೆಚ್ಚುವರಿ ಕೌಂಟರ್ ತೆರೆಯಬೇಕು. ಎಂ.ಎ.ಆರ್-19 ಪ್ರತಿ ಪಡೆಯುವುದನ್ನು ಸರಳೀಕರಣಗೊಳಿಸಬೇಕು ಎಂದು ಕಂದಾಯ ಆಯುಕ್ತರಿಗೆ ಸೂಚಿಸಿದರು.
ಹಲವು ತಿಂಗಳುಗಳಿಂದ ಇ ಮತ್ತು ಬಿ-ಖಾತಾ ನೀಡುತ್ತಿದ್ದು, ಇದುವರೆಗೆ ಶೇ 25ರಷ್ಟು ಗುರಿ ತಲುಪಲು ಸಾಧ್ಯವಾಗಿಲ್ಲ. ಖಾತೆ ಮಾಡಿಸಲು ಆಗದೆ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.