ADVERTISEMENT

ಒಳ ಮೀಸಲು: ಅಲೆಮಾರಿ ಪಾಲು ಕಸಿದ ಬಲಾಢ್ಯರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:14 IST
Last Updated 21 ಆಗಸ್ಟ್ 2025, 7:14 IST
ಅಲೆಮಾರಿ ಸಮುದಾಯದ ಗುಡಿಸಲು (ಸಾಂದರ್ಭಿಕ ಚಿತ್ರ)
ಅಲೆಮಾರಿ ಸಮುದಾಯದ ಗುಡಿಸಲು (ಸಾಂದರ್ಭಿಕ ಚಿತ್ರ)   

ತುಮಕೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡಲು ಕೈಗೊಂಡಿರುವ ಸರ್ಕಾರದ ನಿರ್ಧಾರಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಅಸಮರ್ಪಕ ಹಾಗೂ ತಾರತಮ್ಯದ ಹಂಚಿಕೆ ಎಂದು ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ.

‘ಬಲಾಢ್ಯರು ಅಲೆಮಾರಿಗಳ ಪಾಲು ಕಸಿದಿದ್ದಾರೆ. ಇದುವರೆಗೆ ಹೆಚ್ಚು ಮೀಸಲಾತಿ ಉಂಡ ಸಚಿವರು ಬಹಿರಂಗ ಚರ್ಚೆಗೆ ಬರುವಂತೆ’ ಅಲೆಮಾರಿ ಸಮುದಾಯ ಆಗ್ರಹಿಸಿದೆ.

‘ಅಲೆಮಾರಿ ಸಮುದಾಯ ಇವತ್ತಿಗೂ ತುತ್ತು ಅನ್ನಕ್ಕೂ ಪರದಾಡುತ್ತಿದೆ. ಊರು, ಕೇರಿ, ಮನೆ ಇಲ್ಲ. ಗುಡಿಸಲುಗಳೇ ಅವರಿಗೆ ವಾಸಸ್ಥಾನ. ಹಂದಿ ಸಾಕಾಣಿಕೆ, ಭಿಕ್ಷಾಟನೆ, ಕೂದಲು ಮಾರಾಟದಂತಹ ಕಸುಬು ನಂಬಿ ಊರೂರು ಅಲೆಯುತ್ತಿದ್ದಾರೆ. ಇಂತಹ ಸಮುದಾಯವನ್ನು ಸ್ಪರ್ಶ ಜಾತಿಯ ಜತೆಯೊಂದಿಗೆ ಸೇರಿಸಿ, ಮೀಸಲಾತಿ ಪಡೆದುಕೊಳ್ಳಿ ಎನ್ನುವುದು ಘನ ಘೋರ ಅನ್ಯಾಯ’ ಎಂದು ಹಂದಿ ಜೋಗಿ ಸಂಘ ಕಿಡಿಕಾರಿದೆ.

ADVERTISEMENT

ಈಗಾಗಲೇ ರಾಜಕೀಯ ಸ್ಥಾನಮಾನ, ಹಲವು ಕ್ಷೇತ್ರಗಳಲ್ಲಿ ಉದ್ಯೋಗ, ಅಧಿಕಾರ ಪಡೆದವರಿಗೆ ನಾಗಮೋಹನದಾಸ್‌ ಆಯೋಗದಿಂದ ಪ್ರಯೋಜನವಾಗಿದೆ. ಈ ಅನ್ಯಾಯ ಸರಿಪಡಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಇದರ ಫಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಲೇಖಕ ಶಿವಣ್ಣ ತಿಮ್ಲಾಪುರ, ‘ಎಡಗೈ, ಬಲಗೈ ಸಮುದಾಯಗಳಿಗೆ ತಲಾ ಶೇ 6, ಸ್ಪರ್ಶ, ಅಲೆಮಾರಿಗಳಿಗೆ ಶೇ 5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಇದು ಅಲೆಮಾರಿಗಳ ಪಾಲಿಗೆ ಮರಣ ಶಾಸನವಾಗಲಿದೆ. ನೆಲೆ ಇಲ್ಲದ ಅಲೆಮಾರಿಗಳಿಗೆ ಸ್ಪರ್ಶ ಸಮುದಾಯದ ಜತೆಗೆ ಸ್ಪರ್ಧೆಗೆ ಇಳಿಯಲು ಸಾಧ್ಯವೇ? ಅವರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಡಿಮೆ ಜನಸಂಖ್ಯೆ ಹೊಂದಿರುವ ಸ್ಪರ್ಶ ಸಮುದಾಯ ಮೀಸಲಾತಿಯ ಹೆಚ್ಚಿನ ಪಾಲು ಪಡೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಆಗ್ರಹಿಸಿ ಮೂರು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಈ ಹಾವು-ಏಣಿ ಆಟದಲ್ಲಿ ಹೊಲೆಯರು ಅನಾಯಾಸವಾಗಿ ಶೇ 6ರಷ್ಟು ಮೀಸಲಾತಿ ಗಿಟ್ಟಿಸಿಕೊಂಡು ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ನಾಗಮೋಹನದಾಸ್‌ ವರದಿಯಂತೆ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ನೀಡಿದರೆ ಮಾತ್ರ ಸಾಮಾಜಿಕ ನ್ಯಾಯ ಸಿಕ್ಕಂತೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ, ಮಾನವೀಯ ಕಣ್ಣುಗಳಿಂದ ನೋಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದುಳಿದವರು ಬಲಿ

‘ರಾಜಕಾರಣದ ಮೇಲಾಟಕ್ಕೆ ಅತೀ ಹಿಂದುಳಿದ ಸಮುದಾಯ ಬಲಿಯಾಗಿದೆ. ಸಮಾಜದ ಕೇಂದ್ರಕ್ಕೆ ಚಲಿಸುತ್ತಿದ್ದ ಸಮುದಾಯವನ್ನು ಅಂಚಿನಿಂದಲೇ ತಳ್ಳಲಾಗಿದೆ. ಇಷ್ಟು ದಿನ ಮೀಸಲಾತಿ ಪ್ರಯೋಜನ ಪಡೆದವರು ಬಹಿರಂಗ ಚರ್ಚೆಗೆ ಬರಬೇಕು’ ಎಂದು ಹಂದಿ ಜೋಗಿ ಸಂಘ ಸವಾಲು ಹಾಕಿದೆ. ಸಾಮಾಜಿಕ ನ್ಯಾಯದ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾದರೂ ಏನು? ಧ್ವನಿ ಇಲ್ಲದವರಿಗೆ ಧ್ವನಿಯಾಗುವುದು ಎಂದರೆ ಅವರ ಪ್ರಾತಿನಿಧ್ಯ ಅವಕಾಶ ಕಿತ್ತುಕೊಳ್ಳುವುದೇ? ಎಂದು ಪ್ರಶ್ನಿಸಿದೆ.

ಪೂರ್ವ ನಿಯೋಜಿತ ಪಿತೂರಿ

ಒಳ ಮೀಸಲಾತಿ ಹಂಚಿಕೆ ಸಂಬಂಧ ಸರ್ಕಾರ ರಚಿಸಿದ ನಾಗಮೋಹನದಾಸ್‌ ಆಯೋಗ ಕೇವಲ ಕಣ್ಣೊರೆಸುವ ತಂತ್ರ. ಪೂರ್ವ ನಿಯೋಜಿತ ಪಿತೂರಿಯಂತೆ ಮಾದಿಗ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಪಿತೂರಿ ಮಾಡಿದವರ ವಿರುದ್ಧ ಮತ ರಾಜಕಾರಣದ ಮೂಲಕ ಉತ್ತರಿಸಲು ಮಾದಿಗ ಸಮುದಾಯ ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ. ಮಂಜುನಾಥ್‌ ಹೆತ್ತೇನಹಳ್ಳಿ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.