ADVERTISEMENT

ಪರಿಶಿಷ್ಟ ಜಾತಿಯ ಒಳ ಮೀಸಲು ಜಾರಿಗೆ ಬದ್ಧ: ನಾರಾಯಣಸ್ವಾಮಿ

ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 6:15 IST
Last Updated 2 ಏಪ್ರಿಲ್ 2023, 6:15 IST
ತಿಪಟೂರು ಪಟ್ಟಣದಲ್ಲಿ ಶನಿವಾರ ಆದಿಜಾಂಬವ ಮಹಾಸಭಾದಿಂದ ಆಯೋಜಿಸಿದ್ದ ಸಂವಿಧಾನ ಉಳಿಸಿ ಜನಾಂದೋಲನ ಹಾಗೂ ಜನಜಾಗೃತಿ ಸಮಾವೇಶವನ್ನು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಉದ್ಘಾಟಿಸಿದರು
ತಿಪಟೂರು ಪಟ್ಟಣದಲ್ಲಿ ಶನಿವಾರ ಆದಿಜಾಂಬವ ಮಹಾಸಭಾದಿಂದ ಆಯೋಜಿಸಿದ್ದ ಸಂವಿಧಾನ ಉಳಿಸಿ ಜನಾಂದೋಲನ ಹಾಗೂ ಜನಜಾಗೃತಿ ಸಮಾವೇಶವನ್ನು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಉದ್ಘಾಟಿಸಿದರು   

ತಿಪಟೂರು: ‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಆದೇಶಿಸಿದೆ. ಎಲ್ಲರ ಸಹಕಾರ ಹಾಗೂ ಬದ್ಧತೆಯಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ನಗರದ ಹಾಸ್ಯ ಚಕ್ರವರ್ತಿ ನರಸಿಂಹರಾಜು ರಂಗ ಮಂದಿರದಲ್ಲಿ ಶನಿವಾರ ಆದಿಜಾಂಬವ ಮಹಾಸಭಾ ದಿಂದ ಆಯೋಜಿಸಿ ಸಂವಿಧಾನ ಉಳಿಸಿ ಜನಾಂದೋಲನ ಹಾಗೂ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ 30 ವರ್ಷಗಳ ಹೋರಾಟ, ಜಾಗೃತಿ, ಚಿಂತನೆಗಳು, ಚಳವಳಿ ಮೂಲಕ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಮೋದಿಸಿದೆ. ಇದ ರಿಂದ ಎಲ್ಲಾ ವರ್ಗಗದವರು ಸ್ವಾಭಿ ಮಾನಿ, ವಿದ್ಯಾವಂತರಾಗಿ, ಶಕ್ತರಾಗಿ ಸಮಾಜದಲ್ಲಿ ಬೆಳೆದಾಗ ಮಾತ್ರ ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ADVERTISEMENT

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ಮೊದಲ ಹೋರಾಟದ ಮೂಲಕ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ನೀಡಿದೆ. ಇದರ ಜಾರಿಗೆ ಸಂವಿಧಾನದ 341ನೇ ವಿಧಿಯ ತಿದ್ದುಪಡಿಯಾಗಬೇಕು. ಆಗ ಮಾತ್ರ ಇದರ ಪ್ರಯೋಜನ ಸಿಗುತ್ತದೆ. ಆದ್ದರಿಂದ ಸಮಾಜದವರು ಮತ್ತೊಮ್ಮೆ ಹೋರಾಟ ಮಾಡಬೇಕಾಗುತ್ತದೆ. ಇಲ್ಲವಾದರೆ ಕನಸಿನಲ್ಲಿ ಸಿಹಿ ತಿನ್ನುವ ರೀತಿಯಲ್ಲಿ ಆಗುತ್ತದೆ. ತಿದ್ದುಪಡಿ ಆಗದೇ ಇದ್ದರೆ ಎಲ್ಲಾ ಅವಕಾಶಗಳಿಂದ ವಂಚಿತ ರಾಗುತ್ತೇವೆ ಎಂದು ಎಚ್ಚರಿಸಿದರು.

ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ‘ಆದಿಜಾಂಬವ ಸಮಾಜದವರು ಸಂಘಟಿತರಾಗಿ, ಸರ್ಕಾರದ ಮೀಸಲಾತಿ ಹಾಗೂ ಸವಲತ್ತು ಬಳಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಆಗಷ್ಟೇ ಸಮಾಜ ಗಟ್ಟಿಯಾಗಿ ನಿಲ್ಲಲು ಸಾಧ್ಯ. ನಮ್ಮ ಸಮಾಜವು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕವಾಗಿ ಸಬಲತೆ ಪಡೆದಾಗ ಒಳ ಮೀಸಲಾತಿಯೂ ಸಾರ್ಥಕವಾಗುತ್ತದೆ’ ಎಂದರು.

ಶಾಸಕ ಬಿ.ಸಿ. ನಾಗೇಶ್ ಮಾತನಾಡಿ, ಸಮಾಜವು ಸಂಘಟಿತರಾಗಿ ಜಾಗೃತಿಗೊಂಡಾಗ ಮಾತ್ರ ಏಳಿಗೆ ಸಾಧ್ಯ ಎಂದು ಹೇಳಿದರು.

ಸಮಾಜದ ಗೌರವಾಧ್ಯಕ್ಷ ಕೆ. ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಶ್ರೀಧರ್, ಜಿ.ಪಂ. ಮಾಜಿ ಸದಸ್ಯ ರಾದ ಹುಚ್ಚಯ್ಯ, ಜಿ. ನಾರಾಯಣ್, ಲಕ್ಷ್ಮಿಕಾಂತ್, ನರಸಿಂಹ ಮೂರ್ತಿ, ಕೃಷಿಕ ಸಮಾಜದ ಸದಾಶಿವಯ್ಯ, ಕೆಂಚಮಾರಯ್ಯ, ಮಾಜಿ ಶಾಸಕ ಗಂಗರಾಮಯ್ಯ, ಸುಧಾ ರಂಗಸ್ವಾಮಿ, ಸಮಾಜದ ನರಸಿಂಹಯ್ಯ, ಹರೀಶ್‍ಗೌಡ ಮತ್ತಿಹಳ್ಳಿ, ತಿಪಟೂರು ಕೃಷ್ಣ, ಕೆಂಚಮಾರಯ್ಯ, ರಂಗಸ್ವಾಮಿ, ಕಾಂತರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.