ADVERTISEMENT

ಗಂಗಸಂದ್ರದಲ್ಲಿ ಅಂತರರಾಷ್ಟ್ರೀಯ ನೀರಾವರಿ ಗ್ರಂಥಾಲಯ

ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 13:12 IST
Last Updated 16 ಫೆಬ್ರುವರಿ 2020, 13:12 IST
ತುಮಕೂರು ತಾಲ್ಲೂಕು ಗಂಗಸಂದ್ರ ಗ್ರಾಮದಲ್ಲಿ ಭಾನುವಾರ ಸಂಸದ ಜಿ.ಎಸ್.ಬಸವರಾಜು ಅವರು ಅಧಿಕಾರಿಗಳೊಂದಿಗೆ ಕೆರೆ ವೀಕ್ಷಿಸಿದರು.
ತುಮಕೂರು ತಾಲ್ಲೂಕು ಗಂಗಸಂದ್ರ ಗ್ರಾಮದಲ್ಲಿ ಭಾನುವಾರ ಸಂಸದ ಜಿ.ಎಸ್.ಬಸವರಾಜು ಅವರು ಅಧಿಕಾರಿಗಳೊಂದಿಗೆ ಕೆರೆ ವೀಕ್ಷಿಸಿದರು.   

ತುಮಕೂರು: ತಾಲ್ಲೂಕಿನ ಗಂಗಸಂದ್ರ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ನೀರಾವರಿ ಗ್ರಂಥಾಲಯ, ವಾಟರ್ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.

ಗಂಗಸಂದ್ರ ಗ್ರಾಮದಲ್ಲಿ ಭಾನುವಾರ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದಿಂದ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.

2022 ರೊಳಗೆ ರೈತರ ಅದಾಯ ದುಪ್ಪಟ್ಟು ಮಾಡಬೇಕಾದರೆ ರೈತನ ಜಮೀನಿಗೆ ನೀರು, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಉತ್ತಮ ಮಾರುಕಟ್ಟೆ ದೊರಕಿಸುವುದು ಮೊದಲ ಆಧ್ಯತೆಯಾಗಬೇಕು. ಈ ಸಂಬಂಧ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ರಾಜ್ಯದ ರೈತರ ಉದ್ಧಾರಕ್ಕಾಗಿ ಪರಮಶಿವಯ್ಯನವರ ಅಧ್ಯಯನ ಪೀಠ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ಅಧಿಕಾರಿಗಳು ಯಾವ ಯಾವ ಇಲಾಖೆಯಿಂದ ಯಾವ ರೀತಿಯ ಯೋಜನೆಗಳನ್ನು ಮಾಡಬೇಕು ಎಂಬ ಬಗ್ಗೆ ಪಟ್ಟಿಮಾಡಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಯೋಜನೆ ಜಾರಿಗೆ ಸಮರೋಪಾದಿಯಲ್ಲಿ ಶ್ರಮಿಸಲು ಈ ಸಂದರ್ಭದಲ್ಲಿ ಕರೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಮಾತನಾಡಿ, ‘ಸಂಸದರ ಮಹತ್ತರವಾದ ಯೋಜನೆಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ. ಕೆರೆಯ ಹದ್ದುಬಸ್ತು ನಿಗದಿಗೊಳಿಸುವುದು ಮತ್ತು ಸರ್ಕಾರಿ ಜಮೀನನ್ನು ಗುರುತಿಸಿ ಪರಮಶಿವಯ್ಯ ಅಧ್ಯಯನ ಪೀಠದ ಉದ್ದೇಶಕ್ಕೆ ಕಾಯ್ದಿರಿಸಲಾಗುವುದು’ ಎಂದು ತಿಳಿಸಿದರು.

ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ಜೈಪ್ರಕಾಶ್ ಮಾತನಾಡಿ, ‘ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರ ಅವರ ಕನಸುಗಳನ್ನು ನನಸು ಮಾಡುವತ್ತ ಸಾಗುತ್ತಿದೆ. ಜತೆಗೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಅನೂಕೂಲವಾಗುವಂತೆ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿ ನೀರು ತುಂಬಿಸಲು ಶ್ರಮಿಸಲಾಗುವುದು’ ಎಂದರು.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪರಮಶಿವಯ್ಯನವರ ನೀರಾವರಿ ಕನಸುಗಳ ಜತೆಗೆ ತುಮಕೂರು ನಗರ ಮತ್ತು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರ ಯೋಜನೆಗಳ ಮಾಹಿತಿಯು ಲಭ್ಯವಾಗುವಂತೆ ಮಾಡುವುದು ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ತಹಶೀಲ್ಧಾರ್ ಮೋಹನ್, ಭದ್ರಾ ಮೇಲ್ದಂಡೆ ಇಲಾಖೆಯ ಡಿಸಿಇ ಮಲ್ಲೇಶ್, ಟೂಡಾ ಆಯುಕ್ತ ಯೋಗಾನಂದ್. ಬೆಸ್ಕಾಂ ಅಧಿಕಾರಿ ಗೋವಿಂದಪ್ಪ, ಲೋಕೊಪಯೋಗಿ ಇಲಾಖೆ ಅಧಿಕಾರಿ ಸಂಜೀವರಾಜು, ಕಾವೇರಿ ನೀರಾವರಿ ಇಲಾಖೆಯ ಮೋಹನ್ ಕುಮಾರ್, ನಗರ ನೀರು ಸರಬರಾಜು ಮಂಡಳಿಯ ಚಂದ್ರಶೇಖರ್, ಸ್ಮಾರ್ಟ್ ಸಿಟಿ ಅಧಿಕಾರಿ ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಯ ರಂಗನಾಥ್, ವಿಶ್ವವಿದ್ಯಾನಿಲಯದ ರಮೇಶ್ ರೆಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಲೋಕೇಶ್, ಹೊನ್ನೇಶ್ ಕುಮಾರ್, ಉಮಾಶಂಕರ್, ಗಂಗಸಂದ್ರ ಗುರು, ಗುರುಸಿದ್ದಪ್ಪ, ಸಿದ್ದೇಶ್, ಸಾಗರ್, ಇಮ್ರಾನ್ ಪಾಷ, ಸತ್ಯಾನಂದ್, ಗಂಗಣ್ಣ, ಪ್ರದೀಪ್, ಪರಮಶಿವಯ್ಯನವರ ಕುಟುಂಬದ ಓಹಿಲೇಶ್, ವಿಶ್ವನಾಥ್, ಪ್ರಿಯದರ್ಶಿನಿ ಓಹಿಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.