ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಕುಣಿಗಲ್ನ ದೊಡ್ಡಪೇಟೆಯ ಕೆ.ಎಸ್.ಸಂತೋಷ್ ಎಂಬುವರು ₹29.55 ಲಕ್ಷ ಕಳೆದುಕೊಂಡಿದ್ದಾರೆ.
ಸಂತೋಷ್ ಮೊಬೈಲ್ ಸಂಖ್ಯೆಯನ್ನು ‘A-11-Civitas of Knowledge’ ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿಸಿದ್ದಾರೆ. ಸದರಿ ಗ್ರೂಪ್ನಲ್ಲಿ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಣ ಹೂಡಿಕೆ ಬಗ್ಗೆ ಆಸಕ್ತಿ ತೋರಿದ ಸಂತೋಷ್ ಗ್ರೂಪ್ ಅಡ್ಮಿನ್ಗೆ ಮೆಸೇಜ್ ಮಾಡಿದ್ದಾರೆ. ಆರೋಪಿಗಳು ಈ ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಆರೋಪಿಗಳು ಕಳುಹಿಸಿದ https://stocks.yggsvhaui.com ಲಿಂಕ್ ಕ್ಲಿಕ್ ಮಾಡಿದ ಸಂತೋಷ್ ಅಗತ್ಯ ವಿವರ, ಬ್ಯಾಂಕ್ ಖಾತೆ ದಾಖಲೆ ಸಲ್ಲಿಸಿದ್ದಾರೆ. ನಂತರ ಹಣ ಹೂಡಿಕೆ ಬಗ್ಗೆ ತಿಳಿಸಿದ್ದಾರೆ. ಜುಲೈ 7ರಿಂದ ಆ.11ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹29,86,094 ಹಣ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ₹30,100 ಮಾತ್ರ ವಾಪಸ್ ಹಾಕಿದ್ದಾರೆ.
ಸಂತೋಷ್ ಹಣ ವಾಪಸ್ ನೀಡುವಂತೆ ಮೆಸೇಜ್ ಮಾಡಿದ್ದು, ಮತ್ತಷ್ಟು ಹೂಡಿಕೆ ಮಾಡಿದರೆ ಮಾತ್ರ ಪೂರ್ತಿ ಹಣ ನೀಡಲಾಗುವುದು ಎಂದಿದ್ದಾರೆ. ಮೋಸ ಹೋಗಿರುವುದು ತಿಳಿದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.