ADVERTISEMENT

ಹಲಸಿನ ಹಣ್ಣಿಗೆ ಕೊಳೆ ರೋಗ

ಚಿಕ್ಕನಾಯಕನಹಳ್ಳಿ: ಆತಂಕಕ್ಕೀಡಾದ ರೈತರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 2:12 IST
Last Updated 18 ಡಿಸೆಂಬರ್ 2020, 2:12 IST
ತೊಟ್ಟು ತಿನ್ನುವ ರೋಗ ತಗುಲಿರುವ ಹಲಸಿನ ಹಣ್ಣು
ತೊಟ್ಟು ತಿನ್ನುವ ರೋಗ ತಗುಲಿರುವ ಹಲಸಿನ ಹಣ್ಣು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಹಲಸಿನ ಹಣ್ಣಿಗೆ ತೊಟ್ಟು ತಿನ್ನುವ ರೋಗ ಕಾಣಿಸಿಕೊಂಡಿದೆ. ಉತ್ತಮ ಫಸಲು ಬಂದಿದ್ದರೂ ಈ ರೋಗದಿಂದಾಗಿ ರೈತರು ಆತಂಕಕ್ಕೀಡಾಗಿದ್ದಾರೆ.

ಹಲವೆಡೆ ಹಲಸಿನ ಹಣ್ಣಿನ ಮರಕ್ಕೆ ಈ ರೋಗ ಕಾಣಿಸಿಕೊಂಡಿದೆ. ಹಲಸು ಕಾಯಿಕಟ್ಟುವ ಸಮಯದಲ್ಲೇ ಹುಳ ಸುತ್ತಿಕೊಂಡಿರುತ್ತದೆ. ಹಣ್ಣಿನ ಮೇಲ್ಮೈ ಚೆನ್ನಾಗಿರುತ್ತದೆ ಆದರೆ ಒಳಗಡೆ ಸಂಪೂರ್ಣವಾಗಿ ಹುಳಗಳು ಸೇರಿಕೊಂಡು ಹಣ್ಣನ್ನು ಕೊಳೆಯುವಂತೆ ಮಾಡುತ್ತವೆ.

ಹಲಸಿನ ಹಣ್ಣಿಗೆ ಸುತ್ತಿಕೊಂಡಿರುವ ಈ ರೋಗ ಹಲವು ವರ್ಷಗಳ ಹಿಂದೆಯೇ ಬಂದಿದೆ. ಆದರೆ ಇತ್ತೀಚಿಗೆ ರೋಗ ಸುತ್ತಮುತ್ತಲಿನ ಎಲ್ಲ ಹಲಸಿನ ಮರಗಳಿಗೂ ವ್ಯಾಪಿಸುತ್ತಿದೆ. ಈ ಹುಳ ಒಂದಿಂಚು ಮಾತ್ರವಿದೆ. ನಿಧಾನವಾಗಿ ಹಣ್ಣಿನ ಒಳಗೆ ಸೇರುತ್ತದೆ. ಗ್ರಾಹಕರು ಹಣ್ಣು ಚೆನ್ನಾಗಿದೆ ಎಂದು ಕೊಳ್ಳುತ್ತಾರೆ. ಮನೆಗೆ ಹೋಗಿ ಹಣ್ಣನ್ನು ಬಿಡಿಸಿದರೆ ಕೊಳೆತಿರುತ್ತದೆ. ಕಳೆದ ವರ್ಷಹಣ್ಣು ಫಸಲಿಗೆ ಬಂದ ಮೇಲೆ ಹುಳ ಒಳ ಸೇರುತ್ತಿತ್ತು. ಆದರೆ ಇತ್ತೀಚೆಗೆ ಮಿಡಿಯಲ್ಲಿಯೇ ಸೇರಿಕೊಳ್ಳುತ್ತಿದೆ. ಹೆಚ್ಚುತ್ತಿರುವ ಹುಳಗಳಿಂದ ಈ ವರ್ಷ ಹಲಸಿನ ಫಸಲು ದೊರಕುತ್ತದೊ, ಇಲ್ಲವೊ ಎಂಬ ಅನುಮಾನ ಶುರುವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದರು.

ADVERTISEMENT

ಈ ರೋಗದ ಬಗ್ಗೆ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಜಿಕೆವಿಕೆಗೂ ಮಾಹಿತಿ ನೀಡಿದ್ದೇವೆ. ಈವರೆಗೆ ಪರಿಹಾರ ದೊರೆತಿಲ್ಲ ಎನ್ನುತ್ತಾರೆ ರೈತರು.

ತರಬೇನಹಳ್ಳಿ ಷಡಕ್ಷರಿ ಪ್ರತಿಕ್ರಿಯಿಸಿ, ‘ಈ ಮೊದಲು ಹಣ್ಣೊಂದನ್ನು ₹400ರಿಂದ ₹500ರ ವರೆಗೆ ಮಾರಾಟ ಮಾಡುತ್ತಿದ್ದೆವು. ಉತ್ತಮ ಫಸಲು ಇರುತ್ತಿತ್ತು. ಗವಿರಂಗನಾಥಸ್ವಾಮಿ ದೇವಾಲಯದ ಭಕ್ತರು ದೇಗುಲಕ್ಕೆ ಬಂದು ರಸಾಯನ ಮಾಡಲು ಹಲಸಿನ ಹಣ್ಣನ್ನು ಖರೀದಿಸುತ್ತಿದ್ದರು. ಈಗ ರೋಗದಿಂದಾಗಿ ಫಸಲೇ ಇಲ್ಲ
ದಂತಾಗಿದೆ. ಹುಳ ನಿಧಾನವಾಗಿ ಪೂರ್ಣ ಮರವನ್ನೇ ವ್ಯಾಪಿಸುತ್ತಿದೆ. ಆದಷ್ಟು ಬೇಗ ಈ ರೋಗ ಹತೋಟಿಗೆ ಚಿಕಿತ್ಸೆ ಕಂಡುಹಿಡಿದರೆ ಉತ್ತಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.