ADVERTISEMENT

ಬೆಂಗಳೂರು ಟರ್ಫ್‌ಕ್ಲಬ್‌ ಸ್ಥಳಾಂತರದಿಂದ ಉದ್ಯೋಗ ಸೃಷ್ಟಿ: ಕುಣಿಗಲ್ ಶಾಸಕ ರಂಗನಾಥ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 4:24 IST
Last Updated 28 ಫೆಬ್ರುವರಿ 2026, 4:24 IST
   

ಕುಣಿಗಲ್: ಸ್ಟಡ್‌ಫಾರ್ಮ್‌ಗೆ ಟರ್ಫ್‌ಕ್ಲಬ್ ಸ್ಥಳಾಂತರದಿಂದ ವಾಣಿಜ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ. ಅಕ್ಕಪಕ್ಕದಲ್ಲಿರುವ ರೈತರ ಭೂಮಿಗೆ ಉತ್ತಮ ಬೆಲೆ ಬರಲಿದೆ ಎಂದು ಶಾಸಕ ಡಾ. ರಂಗನಾಥ ಹೇಳಿದರು.

ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಯಲಿಯೂರು ಗ್ರಾಮದಲ್ಲಿ ಹೊನ್ನಾದೇವಿ ದೇವಸ್ಥಾನದಿಂದ ಸೋಮೆ ದೇವರ ಪಾಳ್ಯದವರೆಗೆ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಅಭಿವೃದ್ಧಿ ಸಹಿಸದ ವಿರೋಧ ಪಕ್ಷದವರು ವಿರೋಧ ಮಾಡುವುದಕ್ಕಾಗಿಯೇ ಇದ್ದಾರೆ. ಟೀಕೆಗಳು ಸಾಯುತ್ತವೆ, ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಇವರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

40 ವರ್ಷಗಳ ಇವರೇ ಅಧಿಕಾರದಲ್ಲಿದ್ದರು, ಆಗ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕಾಲ ಕಳೆದು ಈಗ ಅಭಿವೃದ್ಧಿ ಕೆಲಸ ವಿರೋಧಿಸುತ್ತಿದ್ದಾರೆ. ಕುದುರೆ ಫಾರ್ಮ್‌ನಿಂದ ತಾಲ್ಲೂಕಿನ ಜನರಿಗೆ ಅನುಕೂಲವಿಲ್ಲ. ಅದರ ಮುಖ್ಯಸ್ಥನಿಗಷ್ಟೇ ಲಾಭ. ಅಲ್ಲಿರುವ ಕಾರ್ಮಿಕರಿಗೂ ಸರಿಯಾಗಿ ಸಂಬಳ ನೀಡುತ್ತಿಲ್ಲ, ಟರ್ಪ್ ಕ್ಲಬ್‌ನಿಂದ ಬಡವರ ಬದುಕು ಹಸನಾಗುತ್ತದೆ ಎಂದರು.

ವೈ.ಜಿ. ಗುಡ್ಡ ಜಲಾಶಯದಿಂದ ಹುಲಿಯೂರುದುರ್ಗ ಹೋಬಳಿ ದೀಪಾಂಬುದಿ ಕೆರೆ ಸೇರಿದಂತೆ 18 ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಿದ್ದು ಮಾರ್ಚ್ 4ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ಕೊಘಟ್ಟ ರಾಜಣ್ಣ, ಗಂಗಾಶಾನಯ್ಯ, ಹೊನ್ನೇಗೌಡ, ರಾಮಕೃಷ್ಣ, ಪದ್ಮನಾಭ, ಹಾಲವಾಗಿಲ ಸ್ವಾಮಿ, ಕುಮಾರ್, ಹೇಮರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.