ADVERTISEMENT

ತಿಪಟೂರು: ಶ್ರಮದಾನದಿಂದ ಸ್ವಚ್ಛಗೊಂಡ ಕಲ್ಯಾಣಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 3:50 IST
Last Updated 21 ಡಿಸೆಂಬರ್ 2020, 3:50 IST
ತಿಪಟೂರಿನ ಮಂಜುನಾಥ ನಗರದಲ್ಲಿನ ಕಲ್ಯಾಣಿಯನ್ನು ಸ್ವಚ್ಛಗೊಳಿಸುತ್ತಿರುವ ನಗರಸಭೆಯ ಸದಸ್ಯರುಗಳು, ಪೌರಕಾರ್ಮಿಕರು
ತಿಪಟೂರಿನ ಮಂಜುನಾಥ ನಗರದಲ್ಲಿನ ಕಲ್ಯಾಣಿಯನ್ನು ಸ್ವಚ್ಛಗೊಳಿಸುತ್ತಿರುವ ನಗರಸಭೆಯ ಸದಸ್ಯರುಗಳು, ಪೌರಕಾರ್ಮಿಕರು   

ತಿಪಟೂರು: ನಗರದ 30ನೇ ವಾರ್ಡ್‍ನಲ್ಲಿರುವ 300 ವರ್ಷಗಳ ಇತಿಹಾಸ ಹೊಂದಿರುವ ಕರೆಗುಂಡುಕಲ್ಲು ಕಲ್ಯಾಣಿಯನ್ನು ಜೀವಜಲ ಅಭಿಯಾನದ ಮೂಲಕ ಸ್ವಚ್ಛಗೊಳಿಸಿದ್ದು, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನಗರಸಭೆಯ ಅಧ್ಯಕ್ಷ ರಾಮಮೋಹನ್, ಪೌರಾಯುಕ್ತ ಉಮಾಕಾಂತ್ ನೇತೃತ್ವದಲ್ಲಿ ಸತತವಾಗಿ 11 ಗಂಟೆಗಳ ಕಾಲ ಶ್ರಮದಾನದಲ್ಲಿ ತೊಡಗಿಸಿಕೊಂಡ ಸದಸ್ಯರು ಹಾಗೂ ಪೌರಕಾರ್ಮಿಕರು ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.

300 ವರ್ಷಗಳ ಇತಿಹಾಸ ಹೊಂದಿರುವ ಈ ಕಲ್ಯಾಣಿ 42x48 ಅಡಿ ವಿಸ್ತೀರ್ಣ ಹೊಂದಿದ್ದು, 35 ಅಡಿ ಆಳವಿದೆ. ಇದನ್ನು ಕರೆಕಲ್ಲು ಕಲ್ಯಾಣಿ, ಕರೆ ಗುಂಡು ಕಲ್ಲು ಬಾವಿ ಎಂದೂ ಕರೆಯಲಾಗುತ್ತದೆ. ಸ್ವಚ್ಛಗೊಂಡ ನಂತರ ಸುತ್ತಲೂ ಬೇಲಿ ನಿರ್ಮಿಸಿದ್ದು, ಪಕ್ಕದ ಮನೆಗಳ ಮಳೆ ನೀರನ್ನು ಮಳೆ ನೀರು ಕೊಯ್ಲು ಪದ್ಧತಿ ಮೂಲಕ ಕಲ್ಯಾಣಿಗೆ ಬಿಡಲಾಗಿದೆ.

ADVERTISEMENT

ಸದ್ಯ ನಗರಸಭೆಯಿಂದ 3 ಕಲ್ಯಾಣಿ, ಬಾವಿಗಳನ್ನು ಸ್ವಚ್ಛಗೊಳಿಸಿ ನಗರಸಭೆಯಿಂದ ಇ-ಸ್ವತ್ತನ್ನು ಮಾಡಿ ಅದಕ್ಕೆ ಬೇಕಾದಂತಹ ಸೂಕ್ತ ರಕ್ಷಣೆ ಜತೆಗೆ ಜಲಮಾರ್ಗಗಳನ್ನು ಒದಗಿಸಲು ಪ್ರಯತ್ನಿಸಿದ್ದಾರೆ.

‘ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದು ಸಂತಸ ತಂದಿದೆ. ಎಲ್ಲರ ಸಲಹೆ, ಮಾರ್ಗದರ್ಶನವೇ ಕಾರ್ಯಕ್ಕೆ ಸ್ಫೂರ್ತಿ. ನಗರದಲ್ಲಿನ ಹಲವು ಸ್ಥಳಗಳನ್ನು ಪುನರುಜ್ಜೀವನಗೊಳಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್ ಹೇಳಿದರು.

ನಗರದಲ್ಲಿ ಮುಚ್ಚಿಹೋಗಿರುವ, ಒತ್ತುವರಿ ಆಗಿರುವ ರಾಜಕಾಲುವೆಗಳನ್ನು ತೆರವುಗೊಳಿಸುವ ಕಾರ್ಯವಾಗಲಿ ಎನ್ನುವುದು ವಿನಾಯಕನಗರದ ನಿವಾಸಿ ಸದಾಶಿವಯ್ಯ ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.