
ತುರುವೇಕೆರೆ: ಕನ್ನಡ ಭಾಷೆಯೊಳಗೆ ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯ ಅಡಕವಾಗಿವೆ ಎಂದು ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ಎಲ್.ವಿಜಯ ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಜೆಪಿ ಶಾಲಾ ಆವಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘ ಹಾಗೂ ಜೆ.ಪಿ.ಆಂಗ್ಲ ಪ್ರೌಢ ಶಾಲೆಯಿಂದ ಶನಿವಾರ ನಡೆದ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ, ಕನ್ನಡ ಭಾಷಾ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯದೊಳಗೆ ಸಾಕಷ್ಟು ಜನಪರ ಹೋರಾಟ, ಒತ್ತಾಸೆಗಳ ಕೂಗು ಮಾರ್ಧನಿಸಿದೆ. ಕನ್ನಡ ಕೇವಲ ಭಾಷೆಯಾಗಿದರೆ ಅದು ಕನ್ನಡಿಗರ ಜೀವನ ಕ್ರಮವಾಗಿದೆ. ಕನ್ನಡ ಸಾಹಿತ್ಯದಲ್ಲಿ ವಚನ ಚಳವಳಿ, ಭಕ್ತಿ ಪಂಥ, ಕೀರ್ತನಕಾರರು ಸಮಾಜ ತಿದ್ದುವ ಬಹುದೊಡ್ಡ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಕನ್ನಡಕ್ಕಾಗಿ ದುಡಿಯುವ ಮೂಲಕ ಈ ಮಣ್ಣಿನ ಋಣ ತೀರಿಸಬೇಕು ಎಂದರು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಕನ್ನಡ ಸಾಹಿತ್ಯ ಚರಿತ್ರೆ ಹಾಗೂ ಭಾಷಾ ಕೌಶಲಗಳ ಬಗ್ಗೆ ಅರ್ಥಪೂರ್ಣವಾಗಿ ಕಲಿಸಬೇಕು. ತಾಲ್ಲೂಕಿನ ಎಲ್ಲ ಶಾಲೆಗಳ ಶಿಕ್ಷಕರು ಎಸ್.ಎಸ್.ಎಲ್.ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವಂತೆ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು ಎಂದು ಹೇಳಿದರು.
ಜೆ.ಪಿ ಆಂಗ್ಲ ಪ್ರೌಢಶಾಲೆ ಶಿಕ್ಷಕ ಎಚ್.ಬಿ.ಪ್ರಕಾಶ್ ಅವರಿಗೆ ಸಂಘದಿಂದ ತಾಲ್ಲೂಕು ಕನ್ನಡ ಭಾಷಾ ಶಿಕ್ಷಕ ರತ್ನ ಪ್ರಶಸ್ತಿ ನೀಡಲಾಯಿತು.
ಇಸಿಒ ಸಿದ್ದಪ್ಪ, ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಎಂ.ರಂಗಸ್ವಾಮಿ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಗೆಳೆಯರ ಬಳಗದ ಅಧ್ಯಕ್ಷ ಟಿ.ಎಸ್.ಪ್ರಕಾಶ್ ಗುಪ್ತಾ, ಸಂಘದ ಉಪಾಧ್ಯಕ್ಷ ಎಸ್.ಬಿ.ಕುಮಾರ್, ಗೌರವ ಸಲಹೆಗಾರ ಎಲ್.ಮಂಜೇಗೌಡ, ಕಾರ್ಯದರ್ಶಿ ಕೆ.ಟಿ.ಸಂಪತ್, ಕೋಶಾಧ್ಯಕ್ಷ ಪ್ರಭು, ಸಂಘಟನಾ ಕಾರ್ಯದರ್ಶಿ ಎ.ಎಸ್.ನಾಗರಾಜು, ಸೋಮಶೇಖರ್, ಜಿಜೆಸಿ ಉಪಪ್ರಾಂಶುಪಾಲ ವೆಂಕಟೇಶ್, ಮುಖ್ಯ ಶಿಕ್ಷಕ ಎಚ್.ಆರ್.ತುಕಾರಾಂ, ಹಿರಿಯ ಶಿಕ್ಷಕ ಶಿವಣ್ಣ ಅಜ್ಜನಹಳ್ಳಿ, ಆರ್.ಟಿ.ಪಾಂಡು, ಪಾಂಡುರಂಗಯ್ಯ ಎಚ್.ವಿ., ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.