ADVERTISEMENT

ಎರಡೂವರೆ ವರ್ಷದಲ್ಲಿ 5,800 ಬಸ್ ಖರೀದಿ: ಸಚಿವ ರಾಮಲಿಂಗಾರೆಡ್ಡಿ

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಶಂಕುಸ್ಥಾಪನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:45 IST
Last Updated 16 ನವೆಂಬರ್ 2025, 6:45 IST
ಮಧುಗಿರಿ ಪಟ್ಟಣದಲ್ಲಿ ಶನಿವಾರ ಸಮೀಪ ಸಾರಿಗೆ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನ ಪರೀಕ್ಷಾ ಪಥ ಹಾಗೂ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಕೆ.ಎನ್.ರಾಜಣ್ಣ ನೆರವೇರಿಸಿದರು.
ಮಧುಗಿರಿ ಪಟ್ಟಣದಲ್ಲಿ ಶನಿವಾರ ಸಮೀಪ ಸಾರಿಗೆ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನ ಪರೀಕ್ಷಾ ಪಥ ಹಾಗೂ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಕೆ.ಎನ್.ರಾಜಣ್ಣ ನೆರವೇರಿಸಿದರು.   

ಮಧುಗಿರಿ: ರಾಜ್ಯ ಸರ್ಕಾರ ಎರಡೂವರೆ ವರ್ಷದಲ್ಲಿ 5,800 ಬಸ್‌ಗಳನ್ನು ಖರೀದಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪಟ್ಟಣದ ಹಿಂದೂಪುರ ರಸ್ತೆಯಲ್ಲಿರುವ ಪಾಳ್ಯದಹಳ್ಳಿ ಸಮೀಪ ಸಾರಿಗೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಶನಿವಾರ ನಡೆದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನ ಪರೀಕ್ಷಾ ಪಥ ಹಾಗೂ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ 45 ಸ್ವಯಂ ಚಾಲಿತ ವಾಹನ ಚಾಲನ ಪರೀಕ್ಷಾ ಪಥ ನಿರ್ಮಿಸಲಾಗುತ್ತಿದೆ. ಏಳು ಟ್ರ್ಯಾಕ್‌ ಚಾಲನೆಯಲ್ಲಿವೆ. 28 ಟ್ರ್ಯಾಕ್ ಬಾಕಿಯಿದ್ದು, ಈ ವರ್ಷ 10 ಟ್ರ್ಯಾಕ್ ನಿರ್ಮಾಣಕ್ಕೆ ಟೆಂಡರ್ ಆಗಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳ್ಳುವುದು. ನರೇಂದ್ರ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಗುಜರಾತ್‌ನಲ್ಲಿ ಈ ರೀತಿ ಅಭಿವೃದ್ಧಿಯಾಗಿಲ್ಲ ಎಂದರು.

ADVERTISEMENT

ಮಧುಗಿರಿಯಲ್ಲಿ ಸಾರಿಗೆ ವಿಭಾಗೀಯ ಕಚೇರಿಯನ್ನು ಶೀಘ್ರ ಮಂಜೂರು ಮಾಡಲಾಗುವುದು. ಸಾರಿಗೆ ಬಸ್ ನಿಲ್ದಾಣ ನವೀಕರಣಕ್ಕೆ ಆದ್ಯತೆ ಹಾಗೂ ತಾಲ್ಲೂಕಿಗೆ ಮತ್ತಷ್ಟು ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.

ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಮಧುಗಿರಿ ಜಿಲ್ಲಾ ಕೇಂದ್ರ ಮಾಡಬೇಕು ಎಂಬುದು ನಮ್ಮ ಗುರಿ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿ, ಎಸ್.ಪಿ. ಕಚೇರಿ ಹೊರತುಪಡಿಸಿ ಎಲ್ಲ ಕಚೇರಿಗಳನ್ನು ಪ್ರಾರಂಭಿಸಲಾಗಿದೆ. ಕೇಬಲ್ ಕಾರ್ ಬಗ್ಗೆ ಸಲಹೆ ಪಡೆದು ಆದಷ್ಟು ಬೇಗ ಕಾಮಗಾರಿ ಕೈಗೊತ್ತಿಕೊಳ್ಳಲಾಗುವುದು. ತುಮಕೂರಿನ ಸಿದ್ಧಗಂಗಾ ಮಠಕ್ಕೆ 500ಕ್ಕೂ ಹೆಚ್ಚು ಮಕ್ಕಳು ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದು, ಬಸ್‌ಗಾಗಿ ಪರದಾಡುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಮಠದಿಂದ ತುಮಕೂರು ಬಸ್ ನಿಲ್ದಾಣದವರೆಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಅಕ್ರಂ ಪಾಷ ಮಾತನಾಡಿ, ಮಧುಗಿರಿ ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿದ್ದು, ಶೀಘ್ರದಲ್ಲೇ ಕಂದಾಯ ಜಿಲ್ಲೆಯಾಗುವ ಎಲ್ಲ ಲಕ್ಷಣಗಳೂ ಇವೆ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್, ತಾ.ಪಂ ಇಒ ಲಕ್ಷ್ಮಣ್, ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತೆ ಗಾಯತ್ರಿದೇವಿ, ರೇಷ್ಮೆ ಇಲಾಖೆ ಹೆಚ್ಚುರಿ ನಿರ್ದೇಶಕ ವೈ.ಟಿ. ತಿಮ್ಮಯ್ಯ, ಉಪ ನಿರ್ದೇಶಕ ಲಕ್ಷ್ಮೀನರಸಯ್ಯ, ಸಹಾಯಕ ನಿರ್ದೇಶಕ ಮೋಹನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಂಗಪ್ಪ ಇದ್ದರು.

‘ಪ್ರಜಾವಾಣಿ’ ವರದಿ ಪ್ರಕಟ

ನವೆಂಬರ್ 10ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ಜಿಲ್ಲೆಯ ನೂರಾರು ಹಳ್ಳಿಗಿಲ್ಲ ಸರ್ಕಾರಿ ಬಸ್’ ವರದಿಯನ್ನು ಶಾಸಕ ಕೆ.ಎನ್.ರಾಜಣ್ಣ ಸಾರಿಗೆ ಸಚಿವರ ಮುಂದೆ ಪ್ರಸ್ತಾಪಿಸಿ ವರದಿ ಪ್ರಕಾರ ತಾಲ್ಲೂಕಿನ 21 ಗ್ರಾಮಗಳಿಗೆ ಸರ್ಕಾರಿ ಬಸ್ ಇಲ್ಲ. ಶೀಘ್ರ ಇನ್ನಷ್ಟು ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.