
ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಕಿಟ್ಟದಕುಪ್ಪೆ ಸರ್ಕಾರಿ ಶಾಲೆ ಆವರಣಕ್ಕೆ ಶುಕ್ರವಾರ ಗ್ರಾಮಸ್ಥರೇ ಕಾಂಕ್ರೀಟ್ ಹಾಕಿಸಿದರು.
ಕಾಂಕ್ರೀಟ್ ಹಾಕಿಸುವಂತೆ ಹಲವು ಬಾರಿ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಮಾಡಿದ್ದರು. ಆದರೆ ಜಲ್ಲಿಕಲ್ಲು ಮಾತ್ರ ಹಾಕಲಾಗಿತ್ತು. ಇದರಿಂದಾಗಿ ಅನೇಕ ಮಕ್ಕಳು ಎಡವಿ ಬಿದ್ದು ಗಾಯಮಾಡಿಕೊಂಡಿದ್ದರು. ಇದರಿಂದಾಗಿ ಗ್ರಾಮಸ್ಥರೇ ಕಾಂಕ್ರಿಟ್ ಹಾಕಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಬೇಕಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗುವವರು ಎಂದು ಗ್ರಾಮಸ್ಥರು ಹೇಳಿದರು.
50 ವರ್ಷಗಳ ಇತಿಹಾಸವಿರುವ ಗ್ರಾಮದ ಸರ್ಕಾರಿ ಶಾಲೆಯಲ್ಲಿ 65 ಮಕ್ಕಳು ಕಲಿಯುತ್ತಿದ್ದಾರೆ. ಶಾಲಾ ಆವರಣದಲ್ಲಿ ಜಲ್ಲಿಕಲ್ಲು ಇದ್ದುದರಿಂದ ಮಕ್ಕಳು ತಿರುಗಾಡಲು ಭಯಪಡುವಂತಾಗಿತ್ತು. ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಕೆಲವು ಪೋಷಕರು ಒಟ್ಟಾಗಿ ದಾನಿಗಳ ಸಹಾಯ ಪಡೆದು ಕಾಂಕ್ರೀಟ್ ಹಾಕಿಸಿದ್ದಾರೆ.
ಶಾಲೆ ಆವರಣದಲ್ಲಿನ ಹಳೆಯ ಕೊಠಡಿ ಬೀಳುವ ಸ್ಥಿತಿಯಲ್ಲಿದೆ. ಅಧಿಕಾರಿಗಳು ತುರ್ತುಕ್ರಮ ಕೈಗೊಂಡು ಹಾಳಾಗಿರುವ ಕೊಠಡಿ ಕೆಡವಿ ಹೊಸ ಕೊಠಡಿ ನಿರ್ಮಿಸಲು ಮುಂದಾಗಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.