ಕೆ.ಎನ್.ರಾಜಣ್ಣ
ತುಮಕೂರು: ಜಾತಿ ಗಣತಿ ಹತ್ತು ವರ್ಷಗಳ ಹಳೆಯ ವರದಿ. ಮರು ಸಮೀಕ್ಷೆ ನಡೆಸಬೇಕು ಎಂಬ ಕೆಲವರ ಬೇಡಿಕೆಯನ್ನು ಒಪ್ಪಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮರು ಸಮೀಕ್ಷೆ ಮಾಡಬೇಕು ಎಂದು ಹೇಳಿದ ತಕ್ಷಣ ಅವರ ಬೇಡಿಕೆಯನ್ನು ಒಪ್ಪಿದ್ದೇನೆ ಎಂದಲ್ಲ’ ಎಂದರು.
ಸಮೀಕ್ಷೆ ನಡೆಸಿದ ಸಮಯದಲ್ಲಿ ರಾಜ್ಯದ ಜನ ಸಂಖ್ಯೆ 5.50 ಕೋಟಿ ಇತ್ತು. ಈಗ 7.50 ಕೋಟಿಗೆ ಏರಿಕೆಯಾಗಿದೆ. ಆಗಲೂ ಕೆಲವರ ಸಮೀಕ್ಷೆ ಆಗಿಲ್ಲ. ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಇನ್ನೂ 2 ಕೋಟಿಗೂ ಹೆಚ್ಚು ಜನ ಸರ್ವೆ ವ್ಯಾಪ್ತಿಗೆ ಬಂದಿಲ್ಲ. ಹತ್ತು ವರ್ಷಗಳಿಗೆ ಒಮ್ಮೆ ಜನ ಗಣತಿ ನಡೆಯುತ್ತದಲ್ಲವೆ? ಅದೇ ರೀತಿ ಇದನ್ನೂ ಪರಿಗಣಿಸಬಹುದು ಎಂದು ಹೇಳಿದರು.
‘ಜಾತಿ ಗಣತಿ ವಿರೋಧಿಸಿ ಒಕ್ಕಲಿಗ ಸಮುದಾಯ ಸಭೆ ನಡೆಸಿ, ಚರ್ಚಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಅದರಲ್ಲಿ ಯಾವ ಅಂಶ ತಮಗೆ ಇಷ್ಟವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ. ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಹೇಳಿದರು.
ಜಾತಿ ಜನಗಣತಿ ವರದಿ ಸುಮಾರು 8–10 ಸಂಪುಟ ಇದೆ. ಇದನ್ನು ಸಂಪೂರ್ಣವಾಗಿ ಓದಲು ಮೂರು ತಿಂಗಳು ಬೇಕು. ಎಲ್ಲ ಸಚಿವರಿಗೂ ವರದಿಯ ಸಾರಾಂಶದ ಪ್ರತಿ ನೀಡಲಾಗಿದೆ. ಬಿಜೆಪಿಯವರು ಮೀಸಲಾತಿ ವಿರೋಧಿಗಳು ಹಾಗಾಗಿ ಜಾತಿ ಜನಗಣತಿ ವಿರೋಧಿಸುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.