ಕೆ.ಎನ್. ರಾಜಣ್ಣ
ತುಮಕೂರು: ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಇಲ್ಲಿ ಮಂಗಳವಾರ ಎಚ್ಚರಿಸಿದ್ದಾರೆ.
‘ಆ. 13ರಂದು ನಗರದ ಟೌನ್ಹಾಲ್ ಬಳಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದಿಂದ ಪ್ರತಿಭಟನೆ ನಡೆಸಲಾಗುವುದು. ಎರಡು ದಿನದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು’ ಎಂದು ಮುಖಂಡ ಸಿಂಗದಹಳ್ಳಿ ರಾಜಕುಮಾರ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ವಾಲ್ಮೀಕಿ ಸಮುದಾಯದ ಇಬ್ಬರು ಸಚಿವರು ಸಂಪುಟದಿಂದ ಹೊರ ಬಂದಿದ್ದಾರೆ. ಇದರಿಂದ ಸಮಾಜಕ್ಕೆ ಆಘಾತವಾಗಿದೆ. ಕೂಡಲೇ ರಾಜಣ್ಣ ಅವರನ್ನು ಸಚಿವರನ್ನಾಗಿ ಮುಂದುವರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ. ನವದೆಹಲಿಗೆ ನಿಯೋಗ ತೆರಳಿ ಹೈಕಮಾಂಡ್ ನಾಯಕರಲ್ಲೂ ಮನವಿ ಮಾಡಲಾಗುವುದು ಎಂದರು.
ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ, ಮುಖಂಡರಾದ ರಾಮಚಂದ್ರಯ್ಯ, ಲಕ್ಷ್ಮಿನಾರಾಯಣ, ಸರಸ್ವತಿ, ಪ್ರತಾಪ್ ಮದಕರಿ, ಪಿ.ಪಿ.ಬಸವರಾಜು, ಕೆಂಪಹನುಮಯ್ಯ, ಸೀತಕಲ್ಲು ಕೃಷ್ಣಯ್ಯ, ಕುಪ್ಪೂರು ಶ್ರೀಧರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.