
ಕೊಡಿಗೇನಹಳ್ಳಿ: ವಿದ್ಯಾಭ್ಯಾಸ ಮುಗಿದ ನಂತರ ಕೆಲಸಕ್ಕಾಗಿ ಹುಡುಕಾಡುತ್ತಿದ್ದ ಸೂರನಾಗೇನಹಳ್ಳಿ ಗ್ರಾಮದ ಸದಾಶಿವಾರೆಡ್ಡಿ ಹೈನುಗಾರಿಕೆ ಆರಂಭಿಸಿ ಯಶಸ್ಸು ಗಳಿಸಿದ್ದಾರೆ.
ಎಂಟು ಹಸುಗಳಿಂದ ನಿತ್ಯ 150 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ.
ಹೋಬಳಿಯ ಸೂರನಾಗೇನಹಳ್ಳಿಯ ರೈತ ಸದಾಶಿವಾರೆಡ್ಡಿ (44) ಅವರಿಗೆ ಪಿಯುಸಿ ನಂತರ ಬಿಎಸ್ಎಫ್ ಹುದ್ದೆಗೆ ಆಯ್ಕೆಯಾಗಿದ್ದರೂ ಸಹ ಸ್ವಾವಲಂಬಿಯಾಗಿ ಸ್ವಗ್ರಾಮದಲ್ಲೇ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಆಯ್ಕೆಯಾಗಿರುವ ಹುದ್ದೆ ನಿರಾಕರಿಸಿ ಹೈನುಗಾರಿಕೆ ಆರಂಭಿಸಿದ್ದರು.
1997ರಲ್ಲಿ ನಾಲ್ಕು ಸೀಮೆ ಹಸುಗಳನ್ನು ಖರೀದಿಸಿ ಅವುಗಳಿಂದ ಸುಮಾರು 20 ಲೀಟರ್ ಹಾಲನ್ನು ಡೇರಿಗೆ ಹಾಕಲು ಶುರು ಮಾಡಿದ ಇವರಿಗೆ ಹೈನುಗಾರಿಕೆ ಕೈಹಿಡಿದ ಪರಿಣಾಮ ನಂತರದ ದಿನಗಳಲ್ಲಿ ಸೀಮೆ ಹಸುಗಳನ್ನು ಹಂತ ಹಂತವಾಗಿ ಹೆಚ್ಚಳ ಮಾಡಿಕೊಂಡರು. ಇಂದು 22 ಜಾನವಾರುಗಳಲ್ಲಿ ನಾಲ್ಕು ಎತ್ತುಗಳಿವೆ. ಪ್ರತಿದಿನ ಬೆಳಿಗ್ಗೆ 80 ಲೀಟರ್ ಮತ್ತು ಸಂಜೆ 70 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ.
ತಿಂಗಳಿಗೆ ₹1.5 ಲಕ್ಷ ಆದಾಯ ಬರುತ್ತದೆ. ಹಸುಗಳ ಆಹಾರ ಖರ್ಚು ₹75 ಸಾವಿರ ಕಳೆದು ₹75 ಸಾವಿರ ಉಳಿತಾಯವಾಗುತ್ತದೆ. ಹೈನುಗಾರಿಕೆಯಿಂದ ಬಂದ ಲಾಭದಲ್ಲೇ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ. ನಿರಂತರ ಶ್ರದ್ಧೆ ಮತ್ತು ಶ್ರಮವಹಿಸಿದಾಗ ಹೈನುಗಾರಿಕೆಯಲ್ಲಿ ಯಶಸ್ಸು ಸಾಧ್ಯ ಎನ್ನುತ್ತಾರೆ ಸದಾಶಿವಾರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.