ADVERTISEMENT

ಅಧಿವೇಶನದಲ್ಲಿ ಚರ್ಚಿಸಲು ಮನವಿ

ಬಜೆಟ್‌ನಲ್ಲಿ ಕೊಳೆಗೇರಿ ಜನರ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 14:57 IST
Last Updated 9 ಫೆಬ್ರುವರಿ 2019, 14:57 IST
ಕೊಳೆಗೇರಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರಿಗೆ ಮನವಿ ಸಲ್ಲಿಸಿದರು
ಕೊಳೆಗೇರಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರಿಗೆ ಮನವಿ ಸಲ್ಲಿಸಿದರು   

ತುಮಕೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಕೊಳೆಗೇರಿ ಜನರ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಸ್ಲಂ ಜನಾಂದೋಲನಾ ಸಮಿತಿ ಹಾಗೂ ಕೊಳೆಗೇರಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಶನಿವಾರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೊಳೆಗೇರಿ ಜನರಿಗೆ ಬಜೆಟ್‌ನಲ್ಲಿ ಅದ್ಯತೆ ನೀಡದಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಬೆಂಗಳೂರಿನ ಅಧಿಸೂಚಿತ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ₹ 300 ಕೋಟಿ ಮೀಸಲಿರಿಸಲಾಗಿದೆ. ಆದರೆ ಇಡೀ ರಾಜ್ಯದಲ್ಲಿ 2,804 ಘೋಷಿತ ಕೊಳಚೆ ಪ್ರದೇಶಗಳಿವೆ. ಇವುಗಳ ಅಭಿವೃದ್ಧಿಗೆ ಹಣ ಮೀಸಲಿಟ್ಟಿಲ್ಲ ಎಂದು ಪದಾಧಿಕಾರಿಗಳು ದೂರಿದರು.

ಕೊಳೆಗೇರಿ ಜನರಿಗೆ ಭೂ ಒಡೆತನದ ಹಕ್ಕುಪತ್ರ ಯೋಜನೆ ಘೋಷಿಸಿಲ್ಲ. ಕೊಳೆಗೇರಿಗಳ ಅಭಿವೃದ್ಧಿ, ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳ ಭೂ ಸ್ವಾಧೀನಕ್ಕೆ ಹಣ, ಸ್ಲಂ ನಿವಾಸಿಗಳಿಗೆ ನಿರ್ಮಿಸುವ ಮನೆಗಳ ಘಟಕ ವೆಚ್ಚ, ನಗರಪ್ರದೇಶದ ಬಡಜನರಿಗೆ ನಿರ್ಮಿಸುವ ವಸತಿಗೆ ಸರ್ಕಾರಿ ಜಮೀನುಗಳ ಹಸ್ತಾಂತರ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ. ಕಲಾಪದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂದು ಶಾಸಕರನ್ನು ಕೋರಿದರು.

ADVERTISEMENT

ಮನವಿ ಸ್ವೀಕರಿಸಿದ ಜಿ.ಬಿ.ಜ್ಯೋತಿ ಗಣೇಶ್, ‘ಕೊಳೆಗೇರಿ ಜನರಿಗೆ ಆಗಿರುವ ಅನ್ಯಾಯ ಪ್ರಶ್ನಿಸಲು ಪ್ರಯತ್ನಿಸುತ್ತೇನೆ. ವಿಧಾನಸಭೆ ಅಧಿವೇಶನದಲ್ಲಿಯೂ ಪ್ರಸ್ತಾಪಿಸುವೆ’ ಎಂದು ಭರವಸೆ ನೀಡಿದರು.

ಸ್ಲಂ ಜನಾಂದೋಲನಾ-ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಜಿಲ್ಲಾ ಕೊಳೆಗೇರಿ ಸಮಿತಿ ಉಪಾಧ್ಯಕ್ಷೆ ದೀಪಿಕಾ, ಕಾರ್ಯದರ್ಶಿ ಶೆಟ್ಟಾಳಯ್ಯ, ಪಾಧಿಕಾರಿಗಳಾದ ಚಕ್ರಪಾಣಿ, ಶಂಕರಪ್ಪ, ಮೊಹಮ್ಮದ್ ಹಯಾತ್, ಮುರುಗ ಕೃಷ್ಣ, ಮನು, ರಾಹುಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.