ಕೊರಟಗೆರೆ: ಇಲ್ಲಿನ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದಿಂದ ಶುಕ್ರವಾರ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಕೆಂಪೇಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ತಹಶೀಲ್ದಾರ್ ಕೆ.ಮಂಜುನಾಥ ಮಾತನಾಡಿ, ಕೆಂಪೇಗೌಡರ ಕಲ್ಪನೆಯ ಬೆಂಗಳೂರು ಗಮನ ಸೆಳೆಯುವ ಬೆಳೆಯುತ್ತಿದೆ. ಎಲ್ಲ ವರ್ಗದ ಜನರಿಗೆ ಆದ್ಯತೆ ನೀಡಿ ಮಾಡಿದ ಪ್ರದೇಶಗಳು ಇಂದಿಗೂ ಅವರ ಪರಿಕಲ್ಪನೆಯನ್ನು ಸಾರಿ ಹೇಳುವಂತಿದೆ. ಅವರ ಆದರ್ಶ ಎಲ್ಲರಿಗೂ ಮಾದರಿ ಎಂದರು.
ಭೂಮಿ ಮಂಜೂರಾತಿಗೆ ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಸರ್ವೆ ನಂಬರ್ನಲ್ಲಿ ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ತಾಂತ್ರಿಕ ದೋಷದಿಂದ ಮಂಜೂರಾತಿ ಮಾಡಲು ಆಗಿಲ್ಲ. ಒಂದು ವಾರದ ಒಳಗಾಗಿ ಭೂಮಿ ಮಂಜೂರು ಮಾಡಲು ನಕ್ಷೆ ತಯಾರಿಸಿ, ಸ್ಥಳ ತನಿಖೆ ಮಾಡಿ ಸರ್ಕಾರಕ್ಕೆ ಮತ್ತೆ ಪ್ರಸ್ತಾನೆ ಸಲ್ಲಿಸಲಾಗುವುದು ಎಂದರು.
ಸಾಹಿತಿ ಕೆಂಪಣ್ಣ, ನಾಡಪ್ರಭು ಕೆಂಪೇಗೌಡರ ಶೌರ್ಯ ಹಾಗೂ ಜೀವನದ ಇತಿಹಾಸ ಬಿಚ್ಚಿಟ್ಟರು.
ಪಟ್ಟಣದಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ತಾಲ್ಲೂಕು ಆಡಳಿತಕ್ಕೆ 2 ಎಕರೆ ಜಾಗ ಮಂಜೂರು ಮಾಡಿಕೊಡುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಇಲ್ಲಿವರೆಗೂ ಭೂಮಿ ಮಂಜೂರು ಮಾಡಿಲ್ಲ. ಭವನ ನಿರ್ಮಾಣಕ್ಕೆ ಕೂಡಲೇ ಭೂಮಿ ಮಂಜೂರು ಮಾಡಬೇಕು ಎಂದು ಒಕ್ಕಲಿಗ ಮುಖಂಡ ತುಂಬಾಡಿ ಲಕ್ಷ್ಮೀಶ ಆಗ್ರಹಿಸಿದರು.
ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ, ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ರಂಗರಸಪ್ಪ, ಕಾರ್ಯದರ್ಶಿ ಜೆ.ಎನ್.ನರಸಿಂಹರಾಜು, ಇಒ ಅಪೂರ್ವ, ವೈ.ಜಿ.ತೀರ್ಥೇಶ್, ಚಿಕ್ಕರಂಗಯ್ಯ, ಎಚ್.ಎಂ.ರುದ್ರೇಶ್, ಎಲ್.ವಿ.ಪ್ರಕಾಶ್, ಜಿ.ಎಸ್.ರವಿಕುಮಾರ್, ವಿ.ಕೆ.ವೀರಕ್ಯಾತರಾಯ, ಜಿ.ಕೆ.ಕುಮಾರ್, ಮಾವತ್ತೂರು ವೆಂಕಟಪ್ಪ, ಬೂಚನಹಳ್ಳಿ ವೆಂಕಟೇಶ್, ಕಾಕಿ ಮಲ್ಲಯ್ಯ, ಸಂತೋಷ್, ರಾಂಚಂದ್ರಪ್ಪ, ಕೃಷ್ಣಮೂರ್ತಿ, ರಮೇಶ್, ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.