ADVERTISEMENT

‘ಕುಮಾರಸ್ವಾಮಿ ಪ್ರಬುದ್ಧ ರಾಜಕಾರಣಿಯಲ್ಲ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:31 IST
Last Updated 26 ಅಕ್ಟೋಬರ್ 2021, 3:31 IST
ಎಸ್.ಆರ್. ಶ್ರೀನಿವಾಸ್ 
ಎಸ್.ಆರ್. ಶ್ರೀನಿವಾಸ್    

ಗುಬ್ಬಿ: ‘ಎಲ್ಲಾ ಸಮಾರಂಭಗಳಲ್ಲಿಯೂ ಸುಳ್ಳು ಹೇಳುತ್ತಾ, ಅಳುವುದನ್ನೇ ರೂಢಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಬುದ್ಧತೆಯಿಲ್ಲದ ರಾಜಕಾರಣಿ’ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಟೀಕಿಸಿದರು.

ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಕ್ಷೇತ್ರದ ಜನತೆ ನನ್ನನ್ನು ನಾಯಕನನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಹೋಗುವುದಿದ್ದರೆ ಕಾರ್ಯಕರ್ತರನ್ನು ಕೇಳುತ್ತೇನೆ ಹೊರತು ವರಿಷ್ಠರನ್ನಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಕುಮಾರಸ್ವಾಮಿ ಇಲ್ಲದ ಸುಳ್ಳನ್ನು ಹೇಳುತ್ತಿರುವುದನ್ನು ಗಮನಿಸಿದರೆ ಅವರಿಗೆ ಬುದ್ಧಿಭ್ರಮಣೆಯಾದಂತೆ ಕಾಣುತ್ತಿದೆ’ ಎಂದು ಛೇಡಿಸಿದರು.

ADVERTISEMENT

‘ನಮ್ಮ ಯಾವುದೇ ಮುಖಂಡರು, ಕಾರ್ಯಕರ್ತರಿಗೆ ಇಂದಿನ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸದಂತೆ ತಿಳಿಸಿಲ್ಲ. ನನಗೆ ಅಂತ ಪ್ರಮೇಯವೂ ಇಲ್ಲ. ಪಕ್ಷದಿಂದ ಉಚ್ಚಾಟಿಸುವಂತಹ ಯಾವ ಕೆಲಸವನ್ನು ನಾನು ಮಾಡಿಲ್ಲ. ನನ್ನ ಮೇಲೆ ಕ್ರಮ ಜರುಗಿಸುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ತಿಳಿಸಿದರು.

‘ವೈಯಕ್ತಿಕ ಕೆಲಸದ ವಿಚಾರವಾಗಿ ನಾನು ಕಾಂಗ್ರೆಸ್ ನಾಯಕ ಪರಮೇಶ್ವರ ಅವರನ್ನು ಭೇಟಿ ಮಾಡಿದ್ದೇನೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಅದನ್ನೇ ಕೆಲವರು ಗಾಳಿಸುದ್ದಿ ಹಬ್ಬಿಸಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ವೆಂಕಟೇಶ್, ನರಸಿಂಹಯ್ಯ, ರೇವಣ್ಣ, ಶಂಕರ್ ಕುಮಾರ್, ಅಶೋಕ್ ಕುಮಾರ್, ಸುರೇಶ್, ದೇವರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.