ADVERTISEMENT

ಕುಣಿಗಲ್: ಬಿತ್ತಿದ್ದು ರಾಗಿ, ಬಂದಿದ್ದು ಅಣ್ಣೆ

ಕೃಷಿ ಇಲಾಖೆಯಿಂದ ಖರೀದಿಸಿದ ಬೀಜ ಬಿತ್ತನೆ; ಕಂಗಾಲಾದ ರೈತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:30 IST
Last Updated 8 ಡಿಸೆಂಬರ್ 2019, 20:30 IST
ಕುಣಿಗಲ್ ಆಲ್ಲೂಕಿನ ಕೂತಾರಹಳ್ಳಿ ಗ್ರಾಮದಲ್ಲಿ ರಾಗಿ ಬಿತ್ತನೆ ಮಾಡಿ ಬೆಳೆದ ಅಣ್ಣೆ ಸೊಪ್ಪಿನ್ನು ಪ್ರದರ್ಶಿಸಿದ ರೈತ ವೆಂಕಟೇಶ್, ಸುರೇಶ್ ಕಪ್ಪಯ್ಯ
ಕುಣಿಗಲ್ ಆಲ್ಲೂಕಿನ ಕೂತಾರಹಳ್ಳಿ ಗ್ರಾಮದಲ್ಲಿ ರಾಗಿ ಬಿತ್ತನೆ ಮಾಡಿ ಬೆಳೆದ ಅಣ್ಣೆ ಸೊಪ್ಪಿನ್ನು ಪ್ರದರ್ಶಿಸಿದ ರೈತ ವೆಂಕಟೇಶ್, ಸುರೇಶ್ ಕಪ್ಪಯ್ಯ   

ಕುಣಿಗಲ್: ತಾಲ್ಲೂಕಿನ ಕೂತಾರಹಳ್ಳಿ ಗ್ರಾಮಸ್ಥರು ಬಿತ್ತನೆ ಮಾಡಿದ್ದು ರಾಗಿ. ಆದರೆ, ರಾಗಿಗಿಂತ ಹುಲುಸಾಗೆ ಬೆಳೆದದ್ದು ಅಣ್ಣೆ!

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಖರೀದಿಸಿ ರೈತರುರಾಗಿ ಬಿತ್ತನೆ ಮಾಡಿದ್ದರು. ಆದರೆ ರಾಗಿ ತೆನೆಗಿಂತಲೂ ಅಣ್ಣೆಸೊಪ್ಪಿನ ತೆನೆಗಳೇ ಹೆಚ್ಚಾಗಿ ಬೆಳೆದಿದ್ದು ರೈತರು ಕಂಗಾಲಾಗಿದ್ದಾರೆ.

ಕಸಬಾ ಹೋಬಳಿಯ ಕೂತಾರಹಳ್ಳಿ ಗ್ರಾಮಸ್ಥ ವೆಂಕಟೇಶ್, ಸುರೇಶ್, ರಘುನಾಥ್, ರಂಗಸ್ವಾಮಿ ಸೇರಿದಂತೆ ಇತರರು ಪಟ್ಟಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಜುಲೈನಲ್ಲಿ ಬಿತ್ತನೆ ಬೀಜದ 5 ಕೆ.ಜಿ ಚೀಲಗಳನ್ನು ತಲಾ ₹ 240ಕ್ಕೆ ಖರೀದಿಸಿ, ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದ್ದರು.

ADVERTISEMENT

ಗೊಬ್ಬರ ಹಾಕಿ ಉತ್ತಮ ಇಳುವರಿ ನಿರೀಕ್ಷಿಸಿದ್ದವರಿಗೆ ರಾಗಿಯ ಜೊತೆ ಅಣ್ಣೆ ಸೊಪ್ಪಿನ ಬೆಳೆಯೂ ಬೆಳೆದು ನಿಂತು ಅಚ್ಚರಿ ಮೂಡಿಸಿದೆ.

‘ಈ ಬಗ್ಗೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಲಕ್ಷ್ಮಿ ಅವರನ್ನು ಸಂಪರ್ಕಿಸಿದಾಗ, ಇಲಾಖೆಯಿಂದ ಸರಬರಾಜಾಗಿದ್ದ ಬೀಜವನ್ನೇ ನೀಡಿದ್ದೇವೆ. ಜಮೀನಿನಲ್ಲಿ ದೋಷವಿರಬಹುದು ನೋಡಿ ಎಂದು ತಿಳಿಸಿದರು. ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಆದರೆ, ಯಾರೂ ಬಂದು ನೋಡಿಲ್ಲ’ ಎಂದು ರೈತ ವೆಂಕಟೇಶ್ ದೂರಿದರು.

‘ಮೂರು ತಿಂಗಳ ಶ್ರಮವೂ ವ್ಯರ್ಥ, ಹಣವೂ ವ್ಯರ್ಥವಾಗಿದೆ. ಬೆಳೆದು ನಿಂತ ರಾಗಿಯನ್ನು, ಅಣ್ನೆಸೊಪ್ಪಿನಿಂದ ವಿಂಗಡಿಸುವುದು ಕಷ್ಟವಾಗಿದೆ. ಕೂಲಿ ಕಾರ್ಮಿಕರು ಬರುತ್ತಿಲ್ಲ. ಯಂತ್ರದ ಮೂಲಕ ಕಟಾವು ಮಾಡುವುದು ದುಬಾರಿಯಾಗಿದೆ. ಕಟಾವು ಮಾಡಿದ ರಾಗಿ ಮತ್ತು ಅಣ್ಣೆಯನ್ನು ವಿಂಗಡಿಸಲು ಸಾಧ್ಯವಾಗದ ಕಾರಣ ಮೇವಿಗಾಗಿ ಬಳಸಬೇಕಾಗಿದೆ’ ಎಂದು ಅಳಲು ತೋಡಿಕೊಂಡರು.

ನಾವು ಸುಮಾರು 40 ವರ್ಷದಿಂದ ಬೇಸಾಯ ಮಾಡುತ್ತಿದ್ದೇವೆ. ಈ ರೀತಿ ಯಾವ ವರ್ಷವೂ ಆಗಿಲ್ಲ. ರಾಗಿ ಜತೆ ಅಣ್ಣೆ ಬೀಜ ಬೆರೆತಿದೆಯೋ ಗೊತ್ತಿಲ್ಲ. ಗ್ರಾಮಸ್ಥರು ಸಂಗ್ರಹಿಸಿಟ್ಟಿದ್ದ ಬಿತ್ತನೆ ಬೀಜದಿಂದ ಉತ್ತಮ ಇಳುವರಿ ಬಂದಿದೆ. ಇಲಾಖೆಯ ಬೀಜದಿಂದ ರೈತರ ಶ್ರಮ, ಹಣ ವ್ಯರ್ಥವಾಗಿದೆ ಎನ್ನುವರು ರೈತ ರಘುನಾಥ್.

***

ಕೃಷಿ ಇಲಾಖೆ ಮುಂದೆ ಮೆದೆ ಹಾಕಿ ಪ್ರತಿಭಟನೆ ಎಚ್ಚರಿಕೆ

ಬಿತ್ತನೆ ಬೀಜಗಳನ್ನು ಕೊಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಕಚೇರಿಗೆ ಹೋಗಿ ಮಾಹಿತಿ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡಿ, ಸೂಕ್ತ ಮಾರ್ಗದರ್ಶನ ನೀಡಿಲ್ಲ. ಕೆಲವರು ರಾಗಿ ಬೆಳೆ ಕೈಕೊಡುವ ಲಕ್ಷಣ ಅರಿತು ಬಿತ್ತಿದ ರಾಗಿಯನ್ನು ತೆಗೆದು ಹುರುಳಿ, ಜೋಳ ಬೆಳೆದಿದ್ದಾರೆ. ಶೇ 20 ಅಣ್ಣೆ ಬರಬಹುದು ಎಂದು ನಿರೀಕ್ಷಿಸಿದ್ದ ನಮಗೆ ಶೇ 70 ಅಣ್ಣೆ ಬೆಳೆದಿದೆ. ಶೇ 30 ರಾಗಿ ಬಂದಿದೆ. ಅಧಿಕಾರಿಗಳು ಬಂದು ಸಮಸ್ಯೆ ಪರಿಶೀಲಿಸಿ ಪರಿಹಾರ ನೀಡದಿದ್ದರೆ ಇಡೀ ಬೆಳೆಯನ್ನು ತಂದು ಕೃಷಿ ಇಲಾಖೆ ಮುಂದೆ ಮೆದೆ ಹಾಕಿ ಪ್ರತಿಭಟಿಸಲಾಗುವುದು ಎಂದುರೈತ ಸುರೇಶ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.