ಕುಣಿಗಲ್: ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಪ್ರಯತ್ನಗಳು ನಡೆದಿದ್ದು, ತಾಲ್ಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಕೆಲ ಸಂಘಟನೆಗಳು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ಸೇರ್ಪಡೆ ಒತ್ತಾಯ ಸಮಿತಿ ಮುಖ್ಯಮಂತ್ರಿಗೆ ಮನವಿ ಸಲ್ಲಿದ್ದಾರೆ. ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಲು ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕುಣಗಲ್ ತಾಲ್ಲೂಕಿನ ಸಮಾನ ಮನಸ್ಕರ ಸಮಾಲೋಚನಾ ಸಭೆ ಇತ್ತೀಚೆಗೆ ನಡೆಯಿತು. ಸಂಚಾಲಕ ಕೆ.ಜಿ.ಕುಮಾರ್, ಆಡಿಟರ್ ನಾಗರಾಜು, ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ಮೂರ್ತಿ, ಅಪ್ಪಾಜಿ ಗೌಡ, ಜನಪದ ಗಾಯಕ ಕುಣಿಗಲ್ ರಾಮಚಂದ್ರ ಮೊದಲಾದವರು ತಾಲ್ಲೂಕಿನ ವ್ಯಾವಹಾರಿಕ, ಔದ್ಯೋಗಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳು ಬೆಂಗಳೂರಿನೊಂದಿಗೆ ಬೆಸೆದುಕೊಂಡಿರುವ ಕಾರಣ ಕುಣಿಗಲ್ ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಲು ನಿರ್ಣಯ ಕೈಗೊಂಡು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಕುಣಿಗಲ್ ತಾಲ್ಲೂಕು ಮೊದಲು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸೇರಿತ್ತು. ಜಿಲ್ಲೆಯ ಲಿಂಗಾಯತ, ಒಕ್ಕಲಿಗರ ಜಾತಿ ರಾಜಕಾರಣದ ಲಾಭ ಪಡೆಯುವ ಉದ್ದೇಶದಿಂದ ಆನಂತರ ಕುಣಿಗಲ್ ತಾಲ್ಲೂಕನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ. ಡಿ.ಕೆ.ಸುರೇಶ್ ಸಂಸದರಾದ ನಂತರ ತಾಲ್ಲೂಕಿನ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಯಿತು. ಡಾ. ರಂಗನಾಥ್ ವೈದ್ಯಕೀಯ ಕ್ಷೇತ್ರ ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಬಂದ ನಂತರ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ತಮ್ಮ ಪ್ರಾಬಲ್ಯ ಮುಂದುವರೆಸಿದ್ದರೂ ಜಿಲ್ಲಾಮಟ್ಟದ ರಾಜಕಾರಣದಲ್ಲಿ ಪ್ರಾಬಲ್ಯ ಸಾಧಿಸಲಿ ಸಾಧ್ಯವಾಗಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆಯಾದರೆ ರಾಜಕೀಯ ಪ್ರಾಬಲ್ಯ ಮತ್ತು ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎನ್ನುವುದು ಶಾಸಕರ ಬೆಂಬಲಿಗರ ಲೆಕ್ಕಾಚಾರ ಎನ್ನಲಾಗುತ್ತಿದೆ.
ಶಾಸಕ, ಮಾಜಿ ಸಂಸದ ಮತ್ತು ಉಪಮುಖ್ಯಮಂತ್ರಿಯ ಕನಸಾದ ಲಿಂಕ್ ಕೆನಾಲ್ ಕಾಮಗಾರಿಗೆ ಜಿಲ್ಲೆಯ ಇತರ ತಾಲ್ಲೂಕುಗಳ ಶಾಸಕರ ವಿರೋಧ ಮತ್ತು ಪಕ್ಷದಲ್ಲಿನ ಬಿನ್ನಾಭಿಪ್ರಾಯಗಳಿಂದಾಗಿ ವಿಳಂಬವಾಗುತ್ತಿದೆ. ತಾಲ್ಲೂಕು ಆಡಳಿತ ಬೆಂಗಳೂರು ದಕ್ಷಿಣ ಜಿಲ್ಲೆಯ ನಿಯಂತ್ರಣಕ್ಕೆ ಬಂದರೆ ರಾಜಕೀಯವಾಗಿ ಲಾಭ ಪಡೆಯಲು ಹಾಗೂ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ತಾಲ್ಲೂಕಿನಲ್ಲಿ ಕೇಳಿಬರುತ್ತಿದೆ.
‘ಈ ನಿರ್ಧಾರಕ್ಕೆ ತಾಲ್ಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಿದ್ದೇವೆ’ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.