ಕೊರಟಗೆರೆ: ಶಾಲಾ ಕಾಲೇಜು ವೇಳೆಯಲ್ಲಿ ಸಮರ್ಪಕ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
ಕೊರಟಗೆರೆಯಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ಓಡಾಡುತ್ತಿದ್ದಾರೆ. ಆದರೆ ಅವರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲ.
ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಸರಿಯಾಗಿ ಬಸ್ಗಳಿಲ್ಲ. ವಿರಳವಾಗಿ ಬರುವ ಬಸ್ಗಳನ್ನೆ ಹಿಡಿದು ವಿದ್ಯಾರ್ಥಿಗಳು ಊರು ತಲುಪಬೇಕಾದ ಅನಿವಾರ್ಯತೆ ಇದೆ. ಬಸ್ ಬಾಗಿಲಲ್ಲೇ ಜೋತು ಬಿದ್ದು ಪ್ರಯಾಣಿಸಬೇಕು. ಬಸ್ ನಿಲ್ದಾಣಗಳಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ನೋಡಿ ಕೆಲವೊಮ್ಮೆ ಚಾಲಕರು ಬಸ್ ನಿಲ್ಲಿಸದೇ ಹೋಗುವುದೂ ಉಂಟು. ಇದರಿಂದಾಗಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಜಲು ಸಾಧ್ಯವಾಗುತ್ತಿಲ್ಲ.
ತಾಲ್ಲೂಕಿನ ಹಲವು ಭಾಗಗಳಿಗೆ ಖಾಸಗಿ ಬಸ್ ಇದೆಯಾದರೂ ಅದು ಸರಿಯಾದ ಸಮಯಕ್ಕೆ ಬರುವುದಿಲ್ಲ. ಸರ್ಕಾರದ ‘ಶಕ್ತಿ’ ಯೋಜನೆ ಜಾರಿ ನಂತರ ವಿರಳವಾಗಿದ್ದ ಖಾಸಗಿ ಬಸ್ಗಳ ಪ್ರಯಾಣವೂ ನಿಂತು ಹೋಗಿದ್ದು, ವಿದ್ಯಾರ್ಥಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಗೌರಿಬಿದನೂರು ಕಡೆಯಿಂದ ತುಮಕೂರು ಭಾಗಕ್ಕೆ ಬಸ್ ಇದ್ದರೂ ಶಾಲಾ-ಕಾಲೇಜು ಸಮಯದಲ್ಲಿ ಸಾಕಾಗುವುದಿಲ್ಲ ಎಂಬ ದೂರು ಇದೆ. ಈ ಬಗ್ಗೆ ಅನೇಕ ಬಾರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಆದಗ್ಯೂ ಬಸ್ ಓಡಾಟ ಹೆಚ್ಚಾಗಿಲ್ಲ. ಇರುವ ವಿರಳ ಬಸ್ಗಳಲ್ಲಿ ಮೆಟ್ಟಿಲುಗಳ ಮೇಲಿನ ಪ್ರಯಾಣಕ್ಕೆ ಕಡಿವಾಣ ಬಿದ್ದಿಲ್ಲ.
ತುಮಕೂರು-ಕೊರಟಗೆರೆ ನಡುವಿನ ಅಕ್ಷಯ ಕಾಲೇಜು ಬಳಿ ನಿತ್ಯ ನೂರಾರು ವಿದ್ಯಾರ್ಥಿಗಳು ಬಸ್ಗಾಗಿ ಕಾದಿರುತ್ತಾರೆ. ಆಗೊಮ್ಮೆ, ಈಗೊಮ್ಮೆ ಬರುವ ಬಸ್ಗಳಲ್ಲಿ ಜೋತು ಬಿದ್ದು ಜನರು ಪ್ರಯಾಣಿಸುತ್ತಿದ್ದಾರೆ. ಕೆಲವು ಬಸ್ಗಳು ಇಲ್ಲಿ ನಿಲ್ಲಿಸದೆ ಹೋಗುತ್ತವೆ. ಇನ್ನು ಕೆಲ ಬಸ್ಗಳು ನಿಲ್ದಾಣ ಬಿಟ್ಟು ಮುಂದೆ ಹೋಗಿ ನಿಲ್ಲಿಸುವುದರಿಂದ ಓಡಿ ಹೋಗಿ ಬಸ್ ಹತ್ತುವ ಸಾಹಸವನ್ನು ವಿದ್ಯಾರ್ಥಿಗಳು ಮಾಡಬೇಕಿದೆ. ಈ ವೇಳೆ ಕೆಲವರು ಬಿದ್ದ ನಿದರ್ಶನಗಳೂ ಇವೆ.
ಅಕ್ಷಯ ಕಾಲೇಜಿನಿಂದ ನಿತ್ಯ ಕೊರಟಗೆರೆಗೆ ನೂರಾರು ಜನರು ಓಡಾಡುತ್ತಾರೆ. ಬಸ್ ಬಾಗಿಲಲ್ಲೇ ನಿಂತು ಪ್ರಯಾಣಿಸಬೇಕು. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಮನೋಜ್ ಡಿಪ್ಲೊಮಾ ವಿದ್ಯಾರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.