ADVERTISEMENT

ತುಮಕೂರು: 1,010 ಕೆರೆಗಳ 3,492 ಎಕರೆ ಒತ್ತುವರಿ

1,010 ಕೆರೆಗಳ ಜಾಗ ಒತ್ತುವರಿ, 157 ಕೆರೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:16 IST
Last Updated 2 ಜುಲೈ 2025, 6:16 IST
ತುಮಕೂರು ಹೊರವಲಯದ ಶೆಟ್ಟಿಹಳ್ಳಿ ಕೆರೆ
ತುಮಕೂರು ಹೊರವಲಯದ ಶೆಟ್ಟಿಹಳ್ಳಿ ಕೆರೆ   

ತುಮಕೂರು: ಜಿಲ್ಲೆಯಲ್ಲಿ ಕೆರೆಗಳ ಸರ್ವೆ ಕಾರ್ಯ ವೇಗ ಪಡೆದಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ಆಮೆಗತಿಯಲ್ಲಿ ಸಾಗುತ್ತಿದೆ. ಒಟ್ಟು 2,047 ಕೆರೆಗಳಿದ್ದು, ಇದರಲ್ಲಿ 1,010 ಕೆರೆ ಒತ್ತುವರಿಯಾಗಿರುವುದು ಸರ್ವೆ ಸಮಯದಲ್ಲಿ ಗೊತ್ತಾಗಿದೆ.

ಜಿಲ್ಲಾ ಆಡಳಿತ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಎಲ್ಲ ಕೆರೆಗಳ ಸರ್ವೆ ನಡೆಸಲಾಗಿದೆ. 1,15,378 ಎಕರೆ ವಿಸ್ತೀರ್ಣದಲ್ಲಿ 2,047 ಕೆರೆಗಳಿವೆ. ಈ ಪೈಕಿ 3,492 ಎಕರೆ ಒತ್ತುವರಿ ಮಾಡಿಕೊಳ್ಳಲಾಗಿದೆ. ತೆರವು ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇದುವರೆಗೆ ಕೇವಲ 157 ಕೆರೆಗಳ 426 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 853 ಕೆರೆಯ 3,066 ಎಕರೆ ಒತ್ತುವರಿ ತೆರವು ಬಾಕಿ ಇದೆ.

ಜಿಲ್ಲಾ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆ, ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಕೆರೆಗಳನ್ನು ಹಂಚಿಕೆ ಮಾಡಲಾಗಿದೆ. ನಿರ್ವಹಣೆ, ಜವಾಬ್ದಾರಿ, ರಕ್ಷಣೆ ಕೂಡ ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ವಹಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಕೆರೆ ಸಂರಕ್ಷಣೆ ಕಾರ್ಯ ನೆನೆಗುದಿಗೆ ಬಿದ್ದಿದೆ.

ADVERTISEMENT

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಸಮಿತಿ ರಚಿಸಲಾಗಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳುವುದು ಸಮಿತಿಯ ಜವಾಬ್ದಾರಿ. ಒತ್ತುವರಿ ಮುಕ್ತ, ಮಾಲಿನ್ಯ ಮುಕ್ತ ಕೆರೆ ನಿರ್ಮಾಣಕ್ಕೆ ಅಧಿಕಾರಿ ವರ್ಗ ಮುತುವರ್ಜಿ ತೋರಿದಂತೆ ಕಾಣುತ್ತಿಲ್ಲ. ನಗರ ಪ್ರದೇಶದಲ್ಲಿ ಕೆರೆಗಳಿಗೆ ತಂತಿ ಬೇಲಿ ಅಳವಡಿಸುವುದು ವಿಳಂಬವಾಗಿದೆ. ತ್ಯಾಜ್ಯ, ಪ್ಲಾಸ್ಟಿಕ್‌ ಕೆರೆಯ ಒಡಲು ಸೇರುತ್ತಿದೆ. ಇದನ್ನು ತಡೆಯುವ ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ.

ತಿಪಟೂರು ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು 349 ಕೆರೆಗಳಿವೆ. ಆದರೆ, ತಿಪಟೂರಿಗಿಂತ ತುಮಕೂರು ಭಾಗದಲ್ಲಿ ಹೆಚ್ಚಿನ ಕೆರೆಗಳು ಒತ್ತುವರಿಯಾಗಿವೆ. ತುಮಕೂರು ತಾಲ್ಲೂಕಿನ 174 ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿರುವ, ನಗರಕ್ಕೆ ಹೊಂದಿಕೊಂಡಂತೆ ಇರುವ ಬಹುತೇಕ ಕೆರೆಗಳು ಒತ್ತುವರಿಗೆ ಒಳಪಟ್ಟಿವೆ.

‘ಹಲವು ಕಡೆ ಕೆರೆಯ ಜಾಗ ಒತ್ತುವರಿ ಮಾಡಿಕೊಂಡು ಮನೆ, ಶೌಚಾಲಯ, ಕಾಂಪೌಂಡ್‌ ನಿರ್ಮಿಸಿಕೊಳ್ಳಲಾಗಿದೆ. ಕೆಲವರು ತೆಂಗು, ಅಡಿಕೆ ಗಿಡ ನೆಟ್ಟಿದ್ದಾರೆ. ಒತ್ತುವರಿ ಮಾಡಿಕೊಂಡವರ ವಿರುದ್ಧ ಶಿಸ್ತು ಕ್ರಮ ಜರುಗಿಸಿಲ್ಲ. ಸರ್ಕಾರಿ ಜಾಗ ಒತ್ತುವರಿ ಸಾಮಾನ್ಯ ಎಂಬಂತಾಗಿದೆ. ನೀರು ಸಂಗ್ರಹಕ್ಕೆ ಇರುವ ಏಕೈಕ ಮಾರ್ಗ ಕೆರೆ. ಇರುವ ಕೆರೆ ಉಳಿಸಿಕೊಳ್ಳದಿದ್ದರೆ ಜನರಿಗೆ ನೀರು ಎಲ್ಲಿಂದ ಕೊಡುತ್ತಾರೆ’? ಎಂದು ನಗರದ ಬನಶಂಕರಿಯ ಪ್ರವೀಣ್‌ಕುಮಾರ್‌ ಪ್ರಶ್ನಿಸಿದರು.

‘ಮಳೆಗಾಲ, ಬೇಸಿಗೆಯಲ್ಲಿ ಮಾತ್ರ ಅಧಿಕಾರಿಗಳಿಗೆ ಕೆರೆಯ ಜಾಗ ನೆನಪಾಗುತ್ತದೆ. ಉಳಿದ ಸಮಯದಲ್ಲಿ ಕೆರೆಯ ಪರಿಸ್ಥಿತಿ ಏನಾಗಿದೆ ಎಂಬುವುದನ್ನು ತಿರುಗಿಯೂ ನೋಡುವುದಿಲ್ಲ. ಇಚ್ಛಾಶಕ್ತಿ ಕೊರತೆಯ ಕಾರಣಕ್ಕೆ ಕೆರೆಗಳು ಉಳಿಯುತ್ತಿಲ್ಲ. ಎಚ್ಚರಿಕೆ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಒಂದು ಹನಿ ನೀರಿಗೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಬಹುದು’ ಎಂದು ಗೂಳೂರಿನ ಸಂಜೀವಪ್ಪ ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿನ ಕೆರೆಗಳು

ತಾಲ್ಲೂಕು; ಕೆರೆ; ಒತ್ತುವರಿ

ಚಿಕ್ಕನಾಯಕನಹಳ್ಳಿ; 200; 113

ಗುಬ್ಬಿ; 200; 147

ಕೊರಟಗೆರೆ; 194; 42

ಕುಣಿಗಲ್‌; 187; 43

ಮಧುಗಿರಿ; 221; 96

ಪಾವಗಡ; 141; 14

ಶಿರಾ; 182; 127

ತಿಪಟೂರು; 349; 172

ತುಮಕೂರು; 267; 174

ತುರುವೇಕೆರೆ; 106; 82

ಒಟ್ಟು; 2,047; 1,010

‘ಕೆರೆ ಸಂಜೀವಿನಿ’ ಸ್ಥಗಿತ

ಕೆರೆಗಳನ್ನು ಉಳಿಸುವ ಉದ್ದೇಶದಿಂದ ಸರ್ಕಾರ ‘ಕೆರೆ ಸಂಜೀವಿನಿ’ ಯೋಜನೆ ಜಾರಿಗೊಳಿಸಿತ್ತು. ಆದರೆ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಯೋಜನೆ ಸ್ಥಗಿತಗೊಳಿಸಲಾಗಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆಗಳ ಹೂಳೆತ್ತಲು ಅನುದಾನ ನೀಡಲಾಗುತ್ತಿತ್ತು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ₹2 ಲಕ್ಷ ಸಣ್ಣ ನೀರಾವರಿ ಇಲಾಖೆ ಕೆರೆಗೆ ₹4 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಕೆರೆಯ ಹೂಳು ರೈತರ ಜಮೀನುಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಇದರಿಂದ ಕೆರೆಯ ಸಂರಕ್ಷಣೆ ಜತೆಗೆ ರೈತರಿಗೂ ನೆರವಾಗುತ್ತಿತ್ತು. ಕಳೆದ ವರ್ಷದಿಂದ ಯೋಜನೆಯಡಿ ಅನುದಾನ ಬಿಡುಗಡೆಯಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.