ತುಮಕೂರು: ತುಮಕೂರು, ಗುಬ್ಬಿ ಮತ್ತು ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಮೂರು ಜನರನ್ನು ಬಲಿ ಪಡೆದಿರುವ ನರಹಂತಕ ಚಿರತೆ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಚಾಮರಾಜನಗರದ ಸೋಲಿಗರ ನೆರವು ಪಡೆಯಲು ಮುಂದಾಗಿದೆ.
ಹುಲಿಗಳ ಜಾಡು ಹಿಡಿಯುವಲ್ಲಿ ಪರಿಣತರಾಗಿರುವ ಚಾಮರಾಜನಗರ ತಾಲ್ಲೂಕಿನ ಅಟ್ಟಗುಳಿಪುರದ ಆಲುಮೇಗೌಡ, ಶಿವಣ್ಣೇಗೌಡ, ಪುಣಜೂರಿನ ಬೇದೇಗೌಡ, ಅಲಗೇಗೌಡ ಅವರು ತುಮಕೂರು ತಾಲ್ಲೂಕಿನ ಹೆಬ್ಬೂರು ಸುತ್ತ ನಡೆಯುತ್ತಿರುವ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಶನಿವಾರ (ಜ.18) ಅಥವಾ ಭಾನುವಾರದಿಂದ (ಜ.19) ಪಾಲ್ಗೊಳ್ಳುವರು ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಗುಬ್ಬಿ ತಾಲ್ಲೂಕಿನ ಮಣಿಕುಪ್ಪೆಯಲ್ಲಿ ಚಿರತೆ ದಾಳಿಗೆ ಬಲಿಯಾದ ಸಮರ್ಥಗೌಡ ಹೆಸರಿನಲ್ಲಿಯೇ ಜಿಲ್ಲಾಡಳಿತ ‘ಆಪರೇಷನ್ ಸಮರ್ಥ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸೆರೆ ಸಿಕ್ಕ ನರಹಂತಕ ಹುಲಿಯ ಜಾಡು ಹಿಡಿಯುವಲ್ಲಿ ಈ ಸೋಲಿಗರ ತಂಡ ಪ್ರಮುಖಪಾತ್ರವಹಿಸಿತ್ತು. ರಾಜ್ಯದ ಇತರ ಭಾಗಗಳಲ್ಲಿಯೂ ಹುಲಿ ಮತ್ತು ಚಿರತೆ ಸೆರೆಯ ಕಾರ್ಯಾಚರಣೆಯಲ್ಲಿ ತಂಡ ಪಾಲ್ಗೊಂಡಿದೆ.
ಜ.10ರಂದು ಹೆಬ್ಬೂರು ಹೋಬಳಿಯ ಕಮ್ಮನಹಳ್ಳಿ ಬಳಿ ಅಳವಡಿಸಿರುವ ಕ್ಯಾಮೆರಾದಲ್ಲಿ ಚಿರತೆಯೊಂದರ ಚಲನವಲನಗಳು ಸೆರೆಯಾಗಿದ್ದವು. ಮತ್ತೆ ಬುಧವಾರ (ಜ.15) ಇದೇ ಕ್ಯಾಮೆರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದೆ. ಚಿರತೆಗೆ ಹೆದರಿ ರಾತ್ರಿ ವೇಳೆ ಹೆಬ್ಬೂರು ಭಾಗದ ಹಳ್ಳಿಗಳ ಜನರು ಓಡಾಟ ಕಡಿಮೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.