ADVERTISEMENT

ತುಮಕೂರು: ಕಟ್ಟಡ ಕಾರ್ಮಿಕರ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 15:01 IST
Last Updated 10 ಜುಲೈ 2020, 15:01 IST
ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರ ಸಂಘದ ಪದಾಧಿಕಾರಿಗಳು
ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರ ಸಂಘದ ಪದಾಧಿಕಾರಿಗಳು   

ತುಮಕೂರು: ಕಟ್ಟಡ ನಿರ್ಮಾಣ ಕೆಲಸ ನಂಬಿ ಜೀವನ ನಡೆಸುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಬದುಕು ಕೊರೊನಾ ಕಾರಣಕ್ಕೆ ಹೈರಾಣಾಗಿದೆ. ಕೆಲಸಗಳಿಲ್ಲದೆ ಕಾರ್ಮಿಕರ ಬದುಕು ಬೀದಿಗೆ ಬಂದಿದೆ ಎಂದು ಕರ್ನಾಟಕ ರಾಜ್ಯ ಶ್ರಮಿಕ ಕಟ್ಟಡ ಹಾಗೂ ಇನ್ನಿತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಟಿ.ಕೆ.ಗೋವಿಂದರಾಜು ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅಳಿಲುಘಟ್ಟ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಆಗ್ರಹಿಸಿ ಹಮ್ಮಿಕೊಂಡಿರುವ ಪತ್ರ ಚಳವಳಿ ಉದ್ಘಾಟಿಸಿ ಮಾತನಾಡಿದರು.

ಲಾಕ್‍ಡೌನ್ ಘೋಷಿಸಿದ ದಿನದಿಂದ ಯಾವುದೇ ಕೆಲಸಗಳು ನಡೆಯದೆ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಒತ್ತಾಯದ ಮೇರೆಗೆ ಮತ್ತು ಮಾನವೀಯತೆ ಆಧಾರದಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ₹ 5000 ಪರಿಹಾರ ನೀಡಿರುವುದನ್ನು ಸಂಘವು ಸ್ವಾಗತಿಸುತ್ತದೆ. ಆದರೆ ಈ ಪರಿಹಾರದ ಹಣ ಕೆಲವು ಕಾರ್ಮಿಕರಿಗೆ ತಲುಪಿಲ್ಲ. ತಕ್ಷಣವೇ ಎಲ್ಲ ಕಾರ್ಮಿಕರಿಗೂ ಹಣ ತಲುಪಬೇಕು ಎಂದು ಆಗ್ರಹಿಸಿದರು.

ADVERTISEMENT

ಸಂಘದ ಕಾರ್ಯದರ್ಶಿ ಎನ್.ರಾಮಚಂದ್ರ, ‘ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಧನ ಸಹಾಯ 2016-17ರಿಂದಲೂ ಬಿಡುಗಡೆ ಆಗಿಲ್ಲ. ಕಾರ್ಮಿಕರ ಆರೋಗ್ಯಕ್ಕಾಗಿ ನೀಡುವ ವೈದ್ಯಕೀಯ ಧನ ಸಹಾಯ, ಮದುವೆ ಧನ ಸಹಾಯಗಳು ಬಾರದೆ ಕಷ್ಟವಾಗಿದೆ’ ಎಂದು ಹೇಳಿದರು.

ಕೂಡಲೇ ಕಾರ್ಮಿಕರಿಗೆ ಬರಬೇಕಾದ ಪರಿಹಾರ ಮತ್ತು ಸವಲತ್ತುಗಳನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮುಖಂಡರಾದ ಯಡಿಯೂರಪ್ಪ, ನರಸಿಂಹಮೂರ್ತಿ, ಶಿವಣ್ಣ ಪಿ.ಪಾಳ್ಯ, ಎ.ವಿ.ಲಿಂಗರಾಜು, ನಾಗರತ್ನಮ್ಮ, ಪದ್ದಮ್ಮ, ಕಮಲಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.