ತುಮಕೂರು: ಜಿಲ್ಲೆಯಲ್ಲಿ ವೀರಶೈವ, ಲಿಂಗಾಯತ ಎಂಬ ಭೇದವಿಲ್ಲ. ಎಲ್ಲರೂ ಒಗ್ಗೂಡಿಯೇ ಸಮಾಜದ ಏಳಿಗೆಗೆ ದುಡಿಯುತ್ತಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ತುಮಕೂರು ಜಿಲ್ಲಾ ವೀರಶೈವ–ಲಿಂಗಾಯತ ನೌಕರರ ಒಕ್ಕೂಟ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಲೋಕಾಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ವಿರುದ್ಧ ಗೆಲುವು ಸಾಧಿಸಲು ಸಮಾಜದಲ್ಲಿರುವ ಒಗ್ಗಟ್ಟೇ ಕಾರಣ. ಇಂತಹ ಸಮಾರಂಭಗಳು ಆ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇಂದು ನಮ್ಮ ಸಮುದಾಯ ಸೇರಿದಂತೆ ಬಹುತೇಕ ಸಮುದಾಯಗಳಿಗೆ ಉದ್ಯೋಗ ದೊರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯಬೇಡಿ. ಶಿಕ್ಷಣದ ನಂತರ ವಿವಿಧ ಕ್ಷೇತ್ರಗಳಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉದ್ಯಮಪತಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ. ಇದಕ್ಕೆ ಪೂರಕ ವಾತಾವರಣವನ್ನು ಪೋಷಕರು ಕಲ್ಪಿಸಿಕೊಡಬೇಕು ಎಂದು ಸಂಸದರು ಸಲಹೆ ನೀಡಿದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜಿ.ಸಿ.ಮಾಧುಸ್ವಾಮಿ, ಎಲ್ಲ ಸಮುದಾಯಗಳನ್ನು ಒಳಗೊಂಡ ಜಾತಿರಹಿತ ಸಮಾಜ ನಿರ್ಮಾಣದ ಕನಸು ಕಂಡವರು ಬಸವಣ್ಣ. ಅವರ ಅನುಯಾಯಿಗಳಾದ ನಾವುಗಳು ಜಾತಿಗೆ ಸಿಮೀತಗೊಳ್ಳುವುದು ಒಳ್ಳೆಯದಲ್ಲ. ನಮಗಿಂತ ಕೆಳಗಿರುವ ಸಮುದಾಯ ಏಳಿಗೆಗೂ ಕೈಲಾದ ನೆರವು ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಅದೇ ನಾವು ಬಸವಣ್ಣನಿಗೆ ಕೊಡುವ ಗೌರವ ಎಂದರು.
ಇಂದಿನ ಶೈಕ್ಷಣಿಕ ಪದ್ಧತಿ ಅಂಕಗಳ ಮೇಲೆ ನಿಂತಿದೆ. ಕೇಂದ್ರಿಕೃತ ಶೈಕ್ಷಣಿಕ ವ್ಯವಸ್ಥೆಯಿಂದಾಗಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರೂ ಸಿಇಟಿ, ನೀಟ್ನಿಂದಾಗಿ ಮೆಡಿಕಲ್ ಸೀಟು ಪಡೆಯುವುದು ಕಷ್ಟವಾಗಿದೆ. ನಮ್ಮ ಕಣ್ಮುಂದೆಯೇ ಸತ್ಯವಿದ್ದರೂ ಅದನ್ನು ವಿರೋಧಿಸಲು ಆಗದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನಾವಿದ್ದೇವೆ ಎಂದು ಹತಾಸೆ ವ್ಯಕ್ತಪಡಿಸಿದರು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಗಂಗೆ ಹೊನ್ನಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ, ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಬಿ.ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಜೋತಿ ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.