ತುಮಕೂರು: ಸೈಬರ್ ಆರೋಪಿಗಳು ‘ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಗಳಿಸಬಹುದು’ ಎಂದು ಆಮಿಷ ಒಡ್ಡಿ ನಗರದ ಜಯನಗರ ನಿವಾಸಿ ಜಿ.ರತನ್ ಎಂಬುವರಿಗೆ ₹29.61 ಲಕ್ಷ ವಂಚಿಸಿದ್ದಾರೆ.
ಪ್ರಾರಂಭದಲ್ಲಿ ‘ಬ್ಲಾಕ್ಸ್ಟೋನ್ ಇನ್ಸ್ಟಿಟ್ಯೂಟ್ ವಿಐಪಿ ಗ್ರೂಪ್ 617’ ಎಂಬ ವಾಟ್ಸ್ ಆ್ಯಪ್ ಗ್ರೂಪ್ಗೆ ರತನ್ ಅವರ ನಂಬರ್ ಸೇರಿಸಿದ್ದಾರೆ. ಸದರಿ ಗ್ರೂಪ್ನಲ್ಲಿ ಹಣ ಹೂಡಿಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲಿಗೆ ಅವರಿಗೆ ಟ್ರೇಡಿಂಗ್ ಬಗ್ಗೆ ನಂಬಿಕೆ ಬಂದಿಲ್ಲ. ಗ್ರೂಪ್ನಲ್ಲಿದ್ದ ಕೆಲವರು ‘ನಾವು ಕಚೇರಿ ನೋಡಿದ್ದು, ಹಣ ಹೂಡಿಕೆ ಮಾಡಿದ್ದಕ್ಕೆ ಹೆಚ್ಚಿನ ಲಾಭ ಬಂದಿದೆ’ ಎಂದು ಸ್ಕ್ರೀನ್ಶಾರ್ಟ್ ಹಂಚಿಕೊಂಡಿದ್ದಾರೆ.
ನಂತರ ಗ್ರೂಪ್ ಅಡ್ಮೀನ್ ಸಾನ್ವಿ ಸೇಥಿ ಎಂಬುವರನ್ನು ಸಂಪರ್ಕಿಸಿದಾಗ ಟ್ರೇಡಿಂಗ್ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ. ‘ಡಬ್ಲ್ಯೂಬಿಎಸ್ಎಸ್ಪ್ರೊ’ ಎಂಬ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ಯೂಸರ್ ನೇಮ್, ಪಾಸ್ವರ್ಡ್ ರಚಿಸಿಕೊಂಡು ಆಧಾರ್ಕಾರ್ಡ್, ಡೆಬಿಟ್ಕಾರ್ಡ್ ಅಪ್ಡೇಟ್ ಮಾಡಿದ್ದಾರೆ.
ಜುಲೈ 22ರಿಂದ ಆ. 18ರ ವರೆಗೆ ಹಂತ ಹಂತವಾಗಿ ಒಟ್ಟು ₹29,61,430 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹೂಡಿಕೆ ಮಾಡಿರುವ ಹಣಕ್ಕೆ ₹1 ಕೋಟಿ ಲಾಭ ಪಡೆದಿರುವುದಾಗಿ ಆ್ಯಪ್ನಲ್ಲಿ ತೋರಿಸಿದೆ. ಹಣ ಪಡೆಯಲು ಹೋದರೆ ‘ಶ್ಯಾಡೊ ಬ್ಯಾಲೆನ್ಸ್’ ಎಂದು ಗೊತ್ತಾಗಿದೆ.
ಹಣ ಪಡೆದು ವಂಚಿಸಿದವರನ್ನು ಪತ್ತೆ ಹಚ್ಚುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.